
ಬೇಲೂರು: ‘ಯೇಸು, ಬೈಬಲ್ಗೆ ಸಂಬಂಧವಿರುವ ಎನ್ನಲಾಗುತ್ತಿರುವ ಪುಸ್ತಕಗಳನ್ನು ಬೇಲೂರು-ಹಾಸನ ರಸ್ತೆಯ ಉದ್ದಕ್ಕೂ ಎಸೆಯಲಾಗಿದ್ದು, ಮತಾಂತರಕ್ಕೆ ಪ್ರೇರೇಪಣೆ ನೀಡಲಾಗುತ್ತಿದೆ’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆಗೆ ಮಂದಾದರು.
ತಾಲ್ಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಹೆದ್ದಾರಿಯ ಬದಿಯಲ್ಲಿ ಮಂಗಳವಾರ ಎಸೆದಿದ್ದ ಪುಸ್ತಕಗಳನ್ನು ವೀಕ್ಷಿಸಿದ ಬಜರಂಗದಳ ತಾಲ್ಲೂಕು ಘಟಕದ ಅಧ್ಯಕ್ಷ ಭರತ್, ‘ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳುತ್ತಿರುವ ಭಕ್ತರನ್ನು ಮತಾಂತರಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಈ ಪುಸ್ತಕಗಳನ್ನು ಎಸೆಯಲಾಗಿದೆ. ಹುನ್ನಾರು ನಡೆಸುತ್ತಿರುವವರನ್ನು ಪೊಲೀಸ್ ಇಲಾಖೆ ಗುರುತಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ದಕ್ಷಿಣ ಪ್ರಾಂತ್ಯದ ಗೋ ರಕ್ಷಣಾ ಪ್ರಮುಖ್ ಶರತ್, ‘ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಬಲವಂತದ, ಆಮಿಷದ ಅಥವಾ ವಂಚನೆಯ ಮತಾಂತರ ಪ್ರಕರಣಗಳು ಮುಂದುವರಿದಿವೆ’ ಎಂದು ದೂರಿದರು.
ಪುಸ್ತಕಗಳನ್ನು ಪೊಲೀಸ್ ಸಿಬ್ಬಂದಿ ಸಂಗ್ರಹಿಸಿದರು.
ಬಜರಂಗದಳದ ನಾಗೇಶ್, ಮೋಹನ್, ಶಂಕರ್, ದರ್ಶನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.