
ಬೇಲೂರು: ಯಾವುದೇ ರಾಜಕೀಯ ಮನೋಭಾವವಿಲ್ಲದೆ ಅವರ ಸೇವೆಗೆ ಗೌರವ ನೀಡುವ ಉದ್ದೇಶದಿಂದ ಗ್ರಾಮ ಪಂಚಾಯಿತಿಯ ನಿರ್ಗಮಿತ ಸದಸ್ಯರನ್ನು ಸನ್ಮಾನಿಸಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣ ಸಮೀಪದ ವಿ.ಅರ್.ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ನಿರ್ಗಮಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು. ನಾನು ಶಾಸಕನಾದ ನಂತರ ಕ್ಷೇತ್ರದ 46 ಗ್ರಾಮ ಪಂಚಾಯಿತಿಯ ಸದಸ್ಯರು ನನಗೆ ಕೆಲಸ ಮಾಡಲು ಸಹಕಾರ ನೀಡಿರುವರು. ಐದು ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿ, ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಒಬ್ಬ ಜನಪ್ರತಿನಿಧಿಯಾಗಿ ಗೌರವಿಸುವ ಉದ್ದೇಶ ನನ್ನದಾಗಿದೆ. ಗ್ರಾ.ಪಂ. ಸದಸ್ಯರುಗಳ ಸೇವೆ ಅನನ್ಯವಾಗಿದ್ದು, ಸಾರ್ವಜನಿಕರ ಜೊತೆ ಹೆಚ್ಚಿನದಾಗಿ ಅವಿನಭಾವ ಸಂಬಂಧವುಳ್ಳವರಾಗಿದ್ದಾರೆ, ಆದ್ದರಿಂದ ಪಂಚಾಯಿತಿ ಸದಸ್ಯರು ನಿಜವಾದ ಜನಪ್ರತಿನಿಧಿಗಳು ಎಂದರು.
ಪಂಚಾಯಿತಿ ಸದಸ್ಯರೂ ಸೋಲು-ಗೆಲುವನ್ನು ಅನುಭವಿಸಿರುತ್ತಾರೆ. ನಾನೂ ಸಹ ಸೋಲಿನ ಅನುಭವ ಹೊಂದಿದ್ದೇನೆ, ಈಗ ಜನರು ಆಶೀರ್ವಾದಿಸಿದ್ದು, ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು. ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿದರು. ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ನಿರ್ಗಮಿತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.