
ಬೇಲೂರು: ಕೊಡಗು ಭಾಗದಿಂದ ಬಂದು ಸಕಲೇಶಪುರದಲ್ಲಿ ಕಾರ್ಮಿಕ ಮಹಿಳೆ ಶೋಭಾ ಅವರ ಸಾವಿಗೆ ಕಾರಣವಾದ ಒಂಟಿಸಲಗವನ್ನು ಶುಕ್ರವಾರ ರಾತ್ರಿ ಬೇಲೂರು ತಾಲ್ಲೂಕಿನ ಬೆಳ್ಳಾವರ ಗ್ರಾಮದ ಬಿ.ಡಿ.ಮದನ್, ಬಿ.ಡಿ.ಮಲ್ಲಿಕಾರ್ಜುನ ಅವರ ಕಾಫಿ ತೋಟದಲ್ಲಿ ಸೆರೆಹಿಡಿಯಲಾಯಿತು.
ಸಲಗ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ, ಸುಗ್ರೀವ ಸಾಕಾನೆಗಳು ಭಾಗಿಯಾದವು.
ಶುಕ್ರವಾರ ಬೆಳಿಗ್ಗೆಯಿಂದಲೇ ಕಾಡಾನೆಯನ್ನು ಇಟಿಎಫ್ ಸಿಬ್ಬಂದಿ ಟ್ರ್ಯಾಕ್ ಮಾಡುತ್ತಿದ್ದರು. ಬೆಳಿಗ್ಗೆ 9ಕ್ಕೆ ಸಕಲೇಶಪುರ ಭಾಗದಲ್ಲಿದ್ದ ಕಾಡಾನೆ ಬೇಲೂರು ಭಾಗಕ್ಕೆ ಬಂದಿರುವುದು ಖಾತ್ರಿಯಾಯಿತು. ಬೇಲೂರು ಭಾಗಕ್ಕೆ ಆಗಮಿಸಿದ ನಂತರ ಆನೆಯನ್ನು ಟ್ರ್ಯಾಕ್ ಮಾಡುವುದು ಕಷ್ಟವಾಯಿತು. ಕೊನೆಗೆ ಡ್ರೋನ್ ಹಾರಿಸಿ ನರಹಂತಕ ಕಾಡಾನೆಯನ್ನು ಇಟಿಎಫ್ ಸಿಬ್ಬಂದಿ ಪತ್ತೆ ಹಚ್ಚಿದರು.
ಕಾಡಾನೆಗೆ ಅರವಳಿಕೆ ಚುಚ್ಚುಮದ್ದನ್ನು ವೈದ್ಯರು ನೀಡಿದರು. ಕಾಡಾನೆ ಸೆರೆಹಿಡಿದು ದುಬಾರೆ ಆನೆಶಿಬಿರಕ್ಕೆ ಕೊಂಡ್ಯೊಯಲಾಯಿತು.
ಕಾರ್ಯಾಚರಣೆಯಲ್ಲಿ ಡಿಸಿಎಫ್ ಸೌರಭ್ ಕುಮಾರ್, ಎಸಿಎಪ್ ಮೋಹನ್, ಆರ್ಎಫ್ಒ ಬಿ.ಜಿ.ಯತೀಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.