ADVERTISEMENT

ಚೆನ್ನಕೇಶವ ದೇವಾಲಯದಲ್ಲಿ ಕುರಾನ್‌ ಪಠಣ: ಆಗಮ ಪಂಡಿತರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 14:57 IST
Last Updated 30 ಮಾರ್ಚ್ 2023, 14:57 IST
   

ಬೇಲೂರು (ಹಾಸನ): ರಥೋತ್ಸವ ಸಂದರ್ಭದಲ್ಲಿ ಕುರಾನ್‌ ಪಠಣ ಮಾಡುವ ಕುರಿತು ದಾಖಲೆಗಳ ಪರಿಶೀಲನೆ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತ ವಿಜಯ್‌ಕುಮಾರ್ ಅವರು ಗುರುವಾರ ಇಲ್ಲಿನ ಚೆನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದ್ದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವಾಲಯದ ಕೈಪಿಡಿಯಲ್ಲಿ ಮುಜುರೆ (ಕುರಾನ್‌ ಪಠಣ) ಸಲ್ಲಿಸಬೇಕು ಎಂದಿದೆ. ಆದರೆ, ರಥದ ಮುಂದೆ ಅಥವಾ ದೇಗುಲದ ಮುಂದೆ ಸಲ್ಲಿಸಬೇಕೆಂದಿಲ್ಲ. ಕಡತದ ಜೆರಾಕ್ಸ್ ಪ್ರತಿ ಪಡೆದಿದ್ದು, ಹಿರಿಯ ಅಧಿಕಾರಿಗಳಿಗೆ 2–3 ದಿನದಲ್ಲಿ ವರದಿ ಸಲ್ಲಿಸಲಾಗುವುದು’ ಎಂದರು.

‘ರಥೋತ್ಸವದಲ್ಲಿ ಯಾರು, ಯಾವ ಕರ್ತವ್ಯಗಳನ್ನು ನಿರ್ವಹಿಸಬೇಕು? ಯಾವೆಲ್ಲಾ ವ್ಯತ್ಯಾಸಗಳಾಗಿವೆ? ಸಾರ್ವಜನಿಕರಲ್ಲಿ ಮೂಡಿರುವ ಗೊಂದಲಗಳೇನು? ಎಂಬ ಬಗ್ಗೆ ಪರಿಶೀಲಿಸಲಾಗಿದೆ. ಮೈಸೂರಿನ ಮಹಾರಾಜರ ಕಾಲದಲ್ಲಿ ರಚಿಸಿದ ದೇಗುಲದ ಕೈಪಿಡಿಯ ಪ್ರಕಾರ ಪೂಜಾ ವಿಧಿವಿಧಾನಗಳು ನಡೆಯುತ್ತಿದ್ದು, ಕೆಲವು ವ್ಯತ್ಯಾಸಗಳಾಗಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ’ ಎಂದರು.

ADVERTISEMENT

ರಥೋತ್ಸವದ ಸಂದರ್ಭದಲ್ಲಿ ಮೌಲ್ವಿಗಳು ಸಲ್ಲಿಸುವ ಮುಜುರೆಗೆ ಅವಕಾಶ ನೀಡಬಾರದು ಎಂದು ಇತ್ತೀಚೆಗೆ ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಿಗೇ ಇಲಾಖೆಯ ಆಯುಕ್ತರ ಕಚೇರಿಯಿಂದ ಆಗಮ ಪಂಡಿತರು ದೇಗುಲಕ್ಕೆ ಭೇಟಿ ನೀಡಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.