ADVERTISEMENT

ಹಾಸನ| ಕೋರೆಗಾಂವ್‌ ಆತ್ಮಗೌರವದ ಸಂಕೇತ: ಭೀಮ್‌ರಾವ್ ಅಂಬೇಡ್ಕರ್

ಭೀಮಾ ಕೋರೆಗಾಂವ್‌ ವಿಜಯೋತ್ಸವದಲ್ಲಿ ಡಾ.ಅಂಬೇಡ್ಕರ್‌ ಮೊಮ್ಮಗ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:40 IST
Last Updated 21 ಜನವರಿ 2026, 5:40 IST
ಹಾಸನದ ಪ್ರಜಾಸೌಧದ ಬಳಿ ಮಂಗಳವಾರ ಆಯೋಜಿಸಿದ್ದ ಭೀಮಾ ಕೊರೆಗಾಂವ್‌ ವಿಜಯೋತ್ಸವವನ್ನು ಭೀಮ್‌ರಾವ್‌ ಅಂಬೇಡ್ಕರ್ ಉದ್ಘಾಟಿಸಿದರು. 
ಹಾಸನದ ಪ್ರಜಾಸೌಧದ ಬಳಿ ಮಂಗಳವಾರ ಆಯೋಜಿಸಿದ್ದ ಭೀಮಾ ಕೊರೆಗಾಂವ್‌ ವಿಜಯೋತ್ಸವವನ್ನು ಭೀಮ್‌ರಾವ್‌ ಅಂಬೇಡ್ಕರ್ ಉದ್ಘಾಟಿಸಿದರು.    

ಹಾಸನ: ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ನಾವು ಕೇವಲ ಆಚರಣೆಗಾಗಿ ಅಲ್ಲ, ಆತ್ಮಗೌರವದ ಸಂಕೇತವಾಗಿ ಆಚರಿಸಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ, ಡಾ.ಅಂಬೇಡ್ಕರ್ ಅವರ ಮೊಮ್ಮಗ ಭೀಮ್‌ರಾವ್ ಅಂಬೇಡ್ಕರ್ ಹೇಳಿದರು.

ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ನಗರದ ಪ್ರಜಾ ಸೌಧದ ಬಳಿ ಮಂಗಳವಾರ ಹಮ್ಮಿಕೊಂಡಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ಕಾಲಕ್ಕೆ ಶೋಷಣೆ ವಿರುದ್ಧ ಭೀಮಾ ಕೋರೆಗಾಂವ್, ಸಮಾನತೆಗಾಗಿ ನಡೆದ ಹೋರಾಟವಾದರೆ, ಇಂದಿಗೂ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಲೇ ಇದೆ. ತಳ ಸಮುದಾಯದ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಲೇ ಇವೆ. ಇದನ್ನು ಕೊನೆಗಾಣಿಸಲು ಸಂವಿಧಾನದ ಕಟ್ಟುನಿಟ್ಟಿನ ಜಾರಿಯಿಂದ ಮಾತ್ರ ಸಾಧ್ಯ ಎಂದರು.

ADVERTISEMENT

ಭೀಮಾ ಕೋರೆಗಾಂವ್ ಯುದ್ಧವು ಕೇವಲ ಒಂದು ಸೈನಿಕ ಸಂಘರ್ಷವಲ್ಲ, ಅದು ಗೌರವ, ಸ್ವಾಭಿಮಾನ ಮತ್ತು ಸಮಾನತೆಯ ಹೋರಾಟದ ಸಂಕೇತ. 1818ರಲ್ಲಿ ಭೀಮಾ ನದಿಯ ತಟದಲ್ಲಿ ನಡೆದ ಈ ಯುದ್ಧದಲ್ಲಿ ಮಹಾರ್ ಸಮುದಾಯದ ಸೈನಿಕರು, ಬ್ರಿಟಿಷ್ ಸೇನೆಯ ಭಾಗವಾಗಿ ಪೇಶ್ವೆ ಆಳ್ವಿಕೆಗೆ ವಿರುದ್ಧವಾಗಿ ಹೋರಾಡಿದರು. ಅನ್ಯಾಯ, ಅಸ್ಪೃಶ್ಯತೆ ಮತ್ತು ದೌರ್ಜನ್ಯಗಳನ್ನು ಅನುಭವಿಸುತ್ತಿದ್ದ ತುಳಿತಕ್ಕೆ ಒಳಗಾದ ಸಮುದಾಯಗಳು ಈ ಯುದ್ಧದಲ್ಲಿ ಒಟ್ಟಾಗಿ ನಿಂತವು. ಮಹಾರ್ ಸಮುದಾಯದವರು ಸಹಜವಾಗಿಯೇ ಯೋಧರೇ ಆಗಿದ್ದರು. ಮರಾಠಾ ಸೇನೆಯಲ್ಲಿಯೂ ಮಹಾರ್ ಸೈನಿಕರು ಇದ್ದರು. ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿಯೂ ಮಹಾರ್ ಸಮುದಾಯದ ಯೋಧರು ಸೇನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭೀಮಾ ಕೊರೆಗಾಂವ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಹೆಸರು ಇಂದಿಗೂ ಸ್ಮಾರಕದಲ್ಲಿ ಕೆತ್ತಲ್ಪಟ್ಟಿವೆ ಎಂದು ತಿಳಿಸಿದರು.

ಬ್ರಿಟಿಷರು ಮಹಾರ್ ಸಮುದಾಯವನ್ನು ‘ಮಾರ್ಷಿಯಲ್ ರೇಸ್’ (ಯೋಧ ಸಮುದಾಯ) ಎಂದು ಅಧಿಕೃತವಾಗಿ ಗುರುತಿಸಿದ್ದರು. ಭಾರತದಲ್ಲಿ ಇಂತಹ ಗುರುತು ಪಡೆದ ಎರಡು ಸಮುದಾಯಗಳಲ್ಲಿ ಮಹಾರಾಷ್ಟ್ರದ ಮಹಾರ್ ಸಮುದಾಯ ಮತ್ತು ಪಂಜಾಬ್‌ನ ಮತ್ತೊಂದು ಸಮುದಾಯ ಪ್ರಮುಖವಾಗಿವೆ. ಈ ಇತಿಹಾಸವನ್ನು ದೇಶದ ಜನತೆಗೆ ಪರಿಚಯಿಸಿದವರು ಡಾ. ಬಿ.ಆರ್. ಅಂಬೇಡ್ಕರ್. 1927ರಲ್ಲಿ ಮೊದಲ ಬಾರಿಗೆ ಅವರು ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ, ಈ ಹೋರಾಟದ ಮಹತ್ವವನ್ನು ದೇಶದ ಮುಂದೆ ತಂದರು ಎಂದು ವಿವರಿಸಿದರು.

ಇಂದಿಗೂ ಈ ಹೋರಾಟ ಮುಂದುವರಿದಿದೆ. ಈಗ ಅದು ಯುದ್ಧಭೂಮಿಯಲ್ಲಿ ಅಲ್ಲ, ಸಮಾಜದ ಒಳಗೆ ನಡೆಯುತ್ತಿದೆ. ಗೌರವಕ್ಕಾಗಿ, ಹಕ್ಕುಗಳಿಗಾಗಿ, ಸಂವಿಧಾನದ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಹೋರಾಟ ಇದಾಗಿದೆ. ಡಾ. ಅಂಬೇಡ್ಕರ್ ನಮಗೆ ಕೊಟ್ಟ ಮಹಾಮಂತ್ರವೇ ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿರಿ ಎಂದು ಸಲಹೆ ನೀಡಿದರು.

ಶಾಸಕರಾದ ಸ್ವರೂಪ್ ಪ್ರಕಾಶ್, ಸಿ.ಎನ್. ಬಾಲಕೃಷ್ಣ, ವಿಜಯೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ. ಸಂದೇಶ್, ಮನೋಹರ ಬಂತೇಜಿ, ವೀರಶೀಲ ಬಂತೇಜಿ, ಭಾರತೀಯ‌ ಭೌದ್ದ ಮಹಾಸಭಾದ ಸಂಘಟಕ ಮಲ್ಲಿಕಾರ್ಜುನ ಭಾಲ್ಕಿ, ‌ಉತ್ತರ ಕರ್ನಾಟಕ  ಶಾಖೆ ಅಧ್ಯಕ್ಷ ಮನೋಹರ್ ಮೋರೆ, ಮಹಿಳಾ ಶಾಖೆಯ ಅಧ್ಯಕ್ಷೆ ಮಂಗಳಾ ದೊಡ್ಡಮನಿ, ಭೀಮಾ ಕೋರೆಗಾಂವ್‌ ಸಮಿತಿಯ ಉಪಾಧ್ಯಕ್ಷರಾದ ಶಿವಮ್ಮ, ಭಾಗ್ಯಾ ಕಲಿವೀರ್, ಅಂಬುಗ ಮಲ್ಲೇಶ್, ನಾಗರಾಜು ಹೆತ್ತೂರು, ಪ್ರಧಾನ ಕಾರ್ಯದರ್ಶಿ ಮಂಜು ತೇಜೂರು, ಉಮೇಶ್, ವೆಂಕಟೇಶ್ ‌ಬ್ಯಾಕರವಳ್ಳಿ, ರಾಜು ಗೊರೂರು, ರಾಜಶೇಖರ, ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಸತೀಶ್, ತೋಟೇಶ್ ನಿಟ್ಟೂರು, ರಾಮು, ಸೇರಿ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.

ಭೀಮಾ ಕೊರೆಗಾಂವ್‌ ವಿಜಯೋತ್ಸವದ ಅಂಗವಾಗಿ ಮಂಗಳವಾರ ಹಾಸನದಲ್ಲಿ ಮೆರವಣಿಗೆ ನಡೆಯಿತು. 
ಬೌದ್ಧ ಮಹಾಸಭಾ ಸ್ವತಃ ಡಾ.ಅಂಬೇಡ್ಕರ್ ಕಟ್ಟಿದ ಸಂಘಟನೆ. ಜಾತಿ ಹೆಸರಿನಲ್ಲಿ ಮನುಕುಲ ನಾಶ ಮಾಡಿದ ಪೇಶ್ವೆಗಳ ವಿರುದ್ಧ 500 ಮಹಾರ್ ಯೋಧರ ಸಾಧನೆಯ ಫಲವೇ ಈ ವಿಜಯೋತ್ಸವ
ಸಿದ್ದರಾಜು ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ
ಅಂಬೇಡ್ಕರ್ ಅವರ ಮೊಮ್ಮಗ ಹಾಸನಕ್ಕೆ ಪದಾರ್ಪಣೆ ಮಾಡಿರುವುದು ಹೆಮ್ಮೆಯ ವಿಚಾರ. ಜಾತಿ ವಿರುದ್ಧ ಹಾಗೂ ಸಮಾನತೆಗಾಗಿ ಅಂಬೇಡ್ಕರ್ ಹೋರಾಟದ ಫಲ ಎಲ್ಲರಿಗೂ ಲಭಿಸಿದೆ
ಶ್ರೇಯಸ್ ಪಟೇಲ್ ಸಂಸದ

ಸರ್ಕಾರಗಳ ನೀತಿಯಿಂದ ಹಕ್ಕುಗಳು ದುರ್ಬಲ

ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳಿಂದಾಗಿ ಸಂವಿಧಾನಾತ್ಮಕ ಹಕ್ಕುಗಳು ದುರ್ಬಲಗೊಳ್ಳುತ್ತಿವೆ. ಮೀಸಲಾತಿ ನೀತಿ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಉದ್ಯೋಗಾವಕಾಶ ಕಡಿಮೆಯಾಗಿವೆ ಎಂದು ಭೀಮ್‌ರಾವ್‌ ಅಂಬೇಡ್ಕರ್ ಹೇಳಿದರು. ಪದೋನ್ನತಿಯಲ್ಲಿ ಮೀಸಲಾತಿ ಕುರಿತು ಅನೇಕ ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿವೆ. ಸರ್ಕಾರಿ ಸಂಸ್ಥೆಗಳೇ ಇಲ್ಲ ಎನ್ನುವ ವಾದ ಮುಂದಿಡಲಾಗುತ್ತಿದೆ. ಇದು ದೇಶದ ಶೋಷಿತ ಸಮುದಾಯಗಳಿಗೆ ದೊಡ್ಡ ಆತಂಕವಾಗಿದೆ ಎಂದರು.

ಅದ್ದೂರಿ ಮೆರವಣಿಗೆ

ಮೊದಲ ಬಾರಿಗೆ ನಗರದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ಮರಣಾರ್ಥ ಅದ್ದೂರಿ ಮೆರವಣಿಗೆ ನಡೆಯಿತು. ಡಾ.ಅಂಬೇಡ್ಕರ್ ಅವರ ಮೊಮ್ಮಗ ಭೀಮ್‌ರಾವ್ ಅಂಬೇಡ್ಕರ್ ಭಾಗವಹಿಸಿದ್ದು ಮೆರವಣಿಗೆಗೆ ಮೆರುಗು ನೀಡಿತು. ನಗರದ ರೈಲ್ವೆ ನಿಲ್ದಾಣದಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ಹಲವು ಮಂದಿ ಭಾಗಿಯಾಗಿದ್ದರು. ಮೆರವಣಿಗೆ ಉದ್ದಕ್ಕೂ ನೀಲಿ ಬಾವುಟ ರಾರಾಜಿಸಿದವು. ಡಿಜೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಕ್ರಾಂತಿ ಗೀತೆಗಳು ಮೊಳಗಿದವು. ವಿವಿಧ ಸಂಘಟನೆಗಳ ಮುಖಂಡರು ಯುವಕರು ಹೆಜ್ಜೆ ಹಾಕುವ ಮೂಲಕ ಅಂಬೇಡ್ಕರ್ ಹಾಗೂ ಕೋರೆಗಾಂವ್ ವಿಜಯೋತ್ಸವದ ಘೋಷಣೆ ಮೊಳಗಿಸಿ ಸಂಭ್ರಮಿಸಿದರು. ಕಲಾತಂಡಗಳು ಇನ್ನಷ್ಟು ಮೆರುಗು ನೀಡಿದವು. ರೈಲ್ವೆ ನಿಲ್ದಾಣದಿಂದ ವೇದಿಕೆ ಕಾರ್ಯಕ್ರಮ ನಡೆದ ತಹಶೀಲ್ದಾರ್ ಕಚೇರಿವರೆಗೂ ಭೀಮ್‌ರಾವ್ ಅಂಬೇಡ್ಕರ್ ಹಾಗೂ ಇತರರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.