ADVERTISEMENT

ಹಾಸನ| ಬಿಳಿಸುಳಿ ರೋಗ: ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:47 IST
Last Updated 3 ಫೆಬ್ರುವರಿ 2026, 5:47 IST
ಹಾಸನದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ರೈತರ ಅಹವಾಲು ಆಲಿಸಿದರು
ಹಾಸನದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ರೈತರ ಅಹವಾಲು ಆಲಿಸಿದರು   

ಹಾಸನ: ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಕಳೆದ ವರ್ಷ ಬಿಳಿಸುಳಿ ರೋಗ ಕಾಣಿಸಿಕೊಂಡು ರೈತರಿಗೆ ಆರ್ಥಿಕ ನಷ್ಟವಾಗಿದ್ದು, ಈ ಬಾರಿ ಉತ್ತಮ ಮೆಕ್ಕಜೋಳ ಬಿತ್ತನೆ ಬೀಜ ಸರಬರಾಜು ಮಾಡಬೇಕು. ಬಿಳಿಸುಳಿ ರೋಗದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆ ಬೀಜ ಸರಬರಾಜು ಹಾಗೂ ಬಿಳಿಸುಳಿ ರೋಗ ನಿಯಂತ್ರಣ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಸಮಿತಿಯು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ರೈತರು, ಉತ್ಪಾದಕರು, ವಿತರಕರು, ಬಿತ್ತನೆ ಬೀಜ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2025-26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆಯಾಗಿದ್ದ ಮೆಕ್ಕೆಜೋಳಕ್ಕೆ ಬಿಳಿಸುಳಿ ರೋಗ ಕಾಣಿಸಿಕೊಂಡು ರೈತರಿಗೆ ಉಂಟಾಗಿದ್ದರಿಂದ ಆರ್ಥಿಕ ನಷ್ಟದ ಆಗಿದೆ. ರೋಗವನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ವಿಜ್ಞಾನಿಗಳು ಮುಂಜಾಗ್ರತೆ ವಹಿಸಿ ಮಾಹಿತಿ ನೀಡಬೇಕು ಎಂದರು.

ADVERTISEMENT

ಜಿಲ್ಲೆಯು ಹಿಂದೆ ಆಲೂಗಡ್ಡೆ ಬೆಳೆಗೆ ಪ್ರಸಿದ್ಧಿ ಪಡೆದಿತ್ತು. ಆದರೆ ಇಂದು ಹೈನುಗಾರಿಕೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಹೈನುಗಾರಿಕೆಗಾಗಿ ಜಾನುವಾರುಗಳ ಮೇವಿಗೆ ಮೆಕ್ಕೆಜೋಳ ಬಳಸುತ್ತಿದ್ದು, ಮುಸುಕಿನ ಜೋಳದಲ್ಲಿ ಬಿಳಿಸುಳಿ ರೋಗ ತಡೆಗಟ್ಟಲು ಬೀಜಗಳ ಬಳಕೆ, ರಾಸಾಯನಿಕ ಬಳಕೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳ ತಂಡ, ಬಿಳಿಸುಳಿ ರೋಗವು ಮಣ್ಣಿನಿಂದ ಹೆಚ್ಚಾಗಿದೆ. ಒಂದೇ ಭೂಮಿಯಲ್ಲಿ ಪದೇ ಪದೇ ಒಂದೇ ಬೆಳೆ ಬೆಳೆಯುತ್ತಿರುವುದರಿಂದ ರೋಗ ಕಂಡು ಬರುತ್ತಿರುವುದಾಗಿ ವರದಿ ನೀಡಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್‌, ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಬಸವರಾಜು, ಕೃಷಿಕ ಸಮಾಜ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ, ರೈತರು, ಮೆಕ್ಕೆಜೋಳ ಬಿತ್ತನೆ ಬೀಜ ಮಾರಾಟಗಾರರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.