ADVERTISEMENT

ಜಿಲ್ಲೆಯಾದ್ಯಂತ ಬಿಜೆಪಿ ಸಂಭ್ರಮಾಚರಣೆ

ಬಿಹಾರ ಚುನಾವಣೆ; ಎನ್‌ಡಿಎ ಮೈತ್ರಿಕೂಟ ಜಯಭೇರಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:37 IST
Last Updated 15 ನವೆಂಬರ್ 2025, 4:37 IST
ಹಾಸನದ ಬಿಜೆಪಿ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು 
ಹಾಸನದ ಬಿಜೆಪಿ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು    

ಹಾಸನ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಜಯ ದಾಖಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ‌ ವತಿಯಿಂದ ನಗರದಲ್ಲಿ ಶುಕ್ರವಾರ ಸಂಭ್ರಮ ಆಚರಿಸಲಾಯಿತು.

ನಗರದ ಆರ್.ಸಿ. ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಪಕ್ಷದ ಪರ ಘೋಷಣೆ ಕೂಗಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ವಿಶ್ವ ಕಂಡಂತಹ ಮಹಾ ನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ನಡೆದಾಗ ಇಡೀ ವಿಶ್ವವೇ ನೋಡುವಂತೆ 243 ರಲ್ಲಿ 208 ಸ್ಥಾನ ಗಳಿಸುವ ಮೂಲಕ ಪ್ರಚಂಡ ಗೆಲುವನ್ನು ಎನ್.ಡಿ.ಎ. ಪಡೆದಿದೆ ಎಂದರು.

ADVERTISEMENT

ಕಾಂಗ್ರೆಸ್ ಪಕ್ಷದ ನಾಯಕರ ಟೀಕೆಗಳನ್ನು ಪ್ರಶ್ನಿಸಿದ ಅವರು, ನಮ್ಮ ಮೇಲೆ ಚೋರ್ ಎಂದು ಆರೋಪ ಮಾಡುತ್ತಿದ್ದ ಕಾಂಗ್ರೆಸ್, ಈಗ ಬಿಹಾರದಲ್ಲಿ ಕೇವಲ ಎರಡು ಸ್ಥಾನ ಗೆಲ್ಲುವುದಕ್ಕಷ್ಟೇ ಶಕ್ತವಾಗಿದೆ. 135 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಇಂದು ಒಂದು ಅಂಕಿಗೆ ಸೀಮಿತವಾಗಿದೆ. ಮತ ಯಂತ್ರ ತಪ್ಪು, ಚುನಾವಣಾ ಆಯೋಗ ತಪ್ಪು ಎಂದು ಹೇಳುತ್ತಿದ್ದವರು ಈಗ ಮತದಾರರನ್ನೇ ತಪ್ಪು ಎಂದು ಆರೋಪಿಸುವ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಟೀಕಿಸಿದರು.

ಈ ವೇಳೆ ನಗರ ಘಟಕದ ಅಧ್ಯಕ್ಷ ಯೋಗೇಶ್ ಗೌಡ, ಮುಖಂಡರಾದ ಶೋಭನ್ ಬಾಬು, ರಾಜಕುಮಾರ್, ರಾಜೀವ್, ಪ್ರಸನ್ನಕುಮಾರ್, ಚನ್ನಕೇಶವ, ಮೋಹನ್, ವೇದಾವತಿ, ಶೋಭಾ, ಪ್ರಕಾಶ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಆಲೂರಿನಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು 

ಆಲೂರಿನಲ್ಲಿ ಸಂಭ್ರಮಾಚರಣೆ

ಆಲೂರು: ಬಿಹಾರದಲ್ಲಿ ಬಿಜೆಪಿ ಮೈತ್ರಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷೆ ಉಮಾ ರವಿಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿ ಕೃಷ್ಣ ಅಬ್ಬನ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.  ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟ 200ರ ಗಡಿ ದಾಟುತ್ತಿದ್ದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿ ಸೇರಿ ನರೇಂದ್ರ ಮೋದಿ ಹಾಗು ನಿತೀಶ್ ಕುಮಾರ್ ಅವರ ಪರವಾಗಿ ಘೋಷಣೆ ಕೂಗಿದರು. ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಉಮಾ ರವಿಪ್ರಕಾಶ್ ಮಾತನಾಡಿ ಎನ್‌ಡಿಎ ಮೈತ್ರಿಕೂಟ 200 ರ ಗಡಿ ದಾಟುವ ಮೂಲಕ ಅಭೂತಪೂರ್ವ ಜಯ ದಾಖಲಿಸಿದೆ. ರಾಹುಲ್ ಗಾಂಧಿ ಮತಗಳವಿನ ಸುಳ್ಳು ಪ್ರಚಾರ ಮಾಡುವ ಮೂಲಕ ಬಿಹಾರದ ಜನರನ್ನು ದಿಕ್ಕು ತಪ್ಪಿಸಲು ಮುಂದಾದರು. ಬಿಹಾರದ ಜನತೆ ಕಾಂಗ್ರೆಸ್‌ಗೆ ಬುದ್ದಿ ಕಲಿಸಿದ್ದಾರೆ. ಇನ್ನಾದರೂ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುವುದನ್ನು ಬಿಟ್ಟು ದೇಶದ ಅಭಿವೃದ್ಧಿಗಾಗಿ ಮೋದಿ ಅವರಿಗೆ ಸಹಕಾರ ನೀಡಬೇಕು ಎಂದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣ  ಅಬ್ಬನ ಮುಖಂಡರಾದ ನಂಜುಂಡಪ್ಪ ಗಣೇಶ್ ಸ್ನೇಹಜೀವಿ ಎ.ಎಚ್.ಲಕ್ಷ್ಮಣ ಗಜೇಂದ್ರ ಕರಿಯಯ್ಯ ದೇವರಾಜು ಜೆಸಿಪಿ ಲೋಕೇಶ್ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.