ADVERTISEMENT

ಹಿರೀಸಾವೆ: ‘ದಾವಣಿ’ ಅಣಿ ಮಾಡಿರುವ ರೈತರು

ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಗೆ ಸಕಲ ಸಿದ್ಧತೆ: ಬುಧವಾರದಿಂದ ಎತ್ತುಗಳ ಆಗಮನ

ಹಿ.ಕೃ.ಚಂದ್ರು
Published 5 ಜನವರಿ 2026, 4:19 IST
Last Updated 5 ಜನವರಿ 2026, 4:19 IST
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಯ ಮುಖ್ಯ ರಸ್ತೆಯಲ್ಲಿ ಹೋಟೆಲ್, ಅಂಗಡಿಗಳನ್ನು ಹಾಕಲಾಗಿದೆ
ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಯ ಮುಖ್ಯ ರಸ್ತೆಯಲ್ಲಿ ಹೋಟೆಲ್, ಅಂಗಡಿಗಳನ್ನು ಹಾಕಲಾಗಿದೆ   

ಹಿರೀಸಾವೆ: ಹಳ್ಳಿಕಾರ್ ತಳಿ ಎತ್ತುಗಳ ಗಂಡು ಜಾತ್ರೆ ಎಂದು ರೈತಾಪಿ ಜನರಲ್ಲಿ ಪ್ರಖ್ಯಾತಿ ಹೊಂದಿರುವ ಬೂಕನಬೆಟ್ಟದ ರಂಗನಾಥಸ್ವಾಮಿಯ ರಾಸು ಜಾತ್ರೆಗೆ ರೈತರು, ವ್ಯಾಪಾರಸ್ಥರು, ದೇವಸ್ಥಾನದವರು, ಕಂದಾಯ ಇಲಾಖೆಯವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಒಂದು ವಾರದಿಂದ ರೈತರು, ಪ್ರತಿ ವರ್ಷ ಜಾನುವಾರು ಕಟ್ಟಲು ತಾವು ನಿಗದಿ ಪಡಿಸಿಕೊಂಡಿರುವ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ, ಎತ್ತರಕ್ಕೆ ಮಣ್ಣು ತುಂಬಿಸಿ, ಮರದ ಕಂಬಗಳನ್ನು ನೆಟ್ಟು, ಎತ್ತುಗಳನ್ನು ಕಟ್ಟಲು ಜಾತ್ರೆ ಆವರಣದ ತುಂಬೆಲ್ಲ ದಾವಣಿಯನ್ನು (ಎತ್ತುಗಳನ್ನು ಕಟ್ಟುವ ಜಾಗ) ಅಣಿಮಾಡಿದ್ದಾರೆ.

ದೊಡ್ಡ ಮೊತ್ತದ ಹೋರಿಗಳಿಗಾಗಿ ಕೆಲವು ರೈತರು ಚಪ್ಪರ, ಶಾಮಿಯಾನ ಹಾಕಿಸಿ, ಬಣ್ಣ, ಬಣ್ಣದ ಬೆಟ್ಟೆಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದಾರೆ. ಬುಧವಾರದಿಂದ ರೈತರು ಎತ್ತುಗಳನ್ನು ಮೆರವಣಿಗೆಯಲ್ಲಿ ತಂದು ಜಾತ್ರೆ ಆವರಣದಲ್ಲಿ ಪ್ರದರ್ಶನ ಮಾಡಿ, ದಾವಣಿಯಲ್ಲಿ ಕಟ್ಟುತ್ತಾರೆ. ನಂತರ ವ್ಯಾಪಾರ ಪ್ರಾರಂಭವಾಗುತ್ತದೆ. ಈ ವರ್ಷ ಒಳ್ಳೆಯ ರಾಸುಗಳು ಬರುತ್ತವೆ ಮತ್ತು ಉತ್ತಮ ವ್ಯಾಪಾರ ನಡೆಯುವ ನಿರೀಕ್ಷೆಯಲ್ಲಿದ್ದಾರೆ ರೈತರು.

ADVERTISEMENT

ನಮ್ಮ ಊರಿನಿಂದ ಎತ್ತುಗಳನ್ನು ಈ ಜಾತ್ರೆಗೆ ಹೊಡೆದುಕೊಂಡು ಬಂದು ಕಟ್ಟುತ್ತೇವೆ. ನಾವು ಈಗ ಸ್ವಚ್ಛ ಮಾಡಿದ್ದೇವೆ ಎನ್ನುತ್ತಾರೆ ಶ್ರವಣಬೆಳಗೊಳ ಹೋಬಳಿಯ ಹುಳಿಗೆರೆ ಗ್ರಾಮದ ರೈತ ನಾಗರಾಜು.

ಜಾತ್ರೆಯಲ್ಲಿ ಮಾಂಸಾಹಾರಿ ಹೋಟೆಲ್‌ಗಳು, ಸಿಹಿ ತಿಂಡಿ ಅಂಗಡಿಗಳು ಈಗಾಗಲೆ ವ್ಯಾಪಾರ ಪ್ರಾರಂಭಿಸಿವೆ. ಖರ್ಜೂರ, ಅಲಂಕಾರಿಕ, ಗೃಹ ಉಪಯೋಗ ಹಾಗೂ ಕೃಷಿ ಬಳಕೆಯ ವಸ್ತುಗಳು ಸೇರಿದಂತೆ ಇತರೆ ಅಂಗಡಿಗಳನ್ನು ನಿರ್ಮಾಣ ಮಾಡಿ, ವ್ಯಾಪಾರಕ್ಕೆ ಸಿದ್ದರಾಗಿದ್ದಾರೆ.

ಸಂಕ್ರಾಂತಿ ಹಬ್ಬದ ದಿನದಿಂದ ಏಳು ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಹಾಗೂ ಉತ್ಸವ ನಡೆಯುತ್ತದೆ. ಜ.19ರಂದು ಮಧ್ಯಾಹ್ನ 12 ಗಂಟೆಗೆ ಬ್ರಹ್ಮರಥೋತ್ಸವ ಜರುಗುತ್ತದೆ ಎಂದು ದೇವಸ್ಥಾನದ ಪಾರುಪತ್ತೇದಾರ ರಂಗರಾಜು ಮಾಹಿತಿ ನೀಡಿದರು. 

ಹಿರೀಸಾವೆ ಹೋಬಳಿಯ ಬೂಕನಬೆಟ್ಟದ ತಪ್ಪಲಿನಲ್ಲಿ ಎತ್ತುಗಳನ್ನು ಕಟ್ಟಲು ರೈತರು ದಾವಣಿಯನ್ನು ಸಿದ್ಧಪಡಿಸುತ್ತಿರುವುದು
ಬುಧವಾರದ ನಂತರ ಎತ್ತುಗಳನ್ನು ಜಾತ್ರೆಯಲ್ಲಿ ಕಟ್ಟಲು ಅವಕಾಶ ನೀಡಲಾಗುವುದು. ಅದಕ್ಕಿಂತ ಮೊದಲು ಬರುವ ರಾಸುಗಳಿಗೆ ಅವಕಾಶ ನೀಡುವುದಿಲ್ಲ ಎಲ್ಲ ರೈತರು ಸಹಕರಿಸಿ.
ಎಂ.ಆರ್. ನಾಗೇಶ್ ಹಳ್ಳಿಕಾರ ತಳಿ ಸೇವಕ ಮತಿಘಟ್ಟ
ಜಾತ್ರೆಗೆ ಬರುವ ರಾಸುಗಳಿಗೆ ಕುಡಿಯುವ ನೀರು ಬೆಳಕು ಸೇರಿದಂತೆ ಮೂಲಸೌಲಭ್ಯ ಒದಗಿಸಲು ಎಲ್ಲ ರೀತಿಯಿಂದ ಸಿದ್ದತೆ ಮಾಡಲಾಗಿದೆ.
ಎಸ್.ಎಲ್. ಯೋಗೇಶ್ ಕಂದಾಯ ನಿರೀಕ್ಷಕ ಹಿರೀಸಾವೆ

ರಾಸು ಸುಂಕ ರದ್ದು

ಅಂಗಡಿ ಸುಂಕ ದುಬಾರಿ ಈ ವರ್ಷದ ರಾಸು ಮತ್ತು ಎತ್ತಿನ ಗಾಡಿ ಸುಂಕವನ್ನು ಹರಾಜಿನಿಂದ ಕೈಬಿಡಲಾಗಿದೆ. ಆದರೆ ಅಂಗಡಿಗಳ ಮೇಲಿನ ಸುಂಕವು ₹ 10.65 ಲಕ್ಷಕ್ಕೆ ಬಿಡ್ಡ್ ನಿಲ್ಲುವ ಮೂಲಕ ಪ್ರತಿವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವರ್ಷ ಉತ್ತಮ ಎತ್ತುಗಳಿಗೆ ನಗದು ಬಹುಮಾನ ನೀಡುತ್ತಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಈ ವರ್ಷದ ಜಾತ್ರೆಯ ಫೂರ್ವಭಾವಿ ಸಭೆಯಲ್ಲಿ ನಗದು ಬದಲು 18 ಜೊತೆ ರಾಸುಗಳಿಗೆ 2 ಗ್ರಾಂನಂತೆ ಚಿನ್ನವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.