ಕೊಣನೂರು: ಬಸವಾಪಟ್ಟಣ ಮತ್ತು ರುದ್ರಪಟ್ಟಣ ಗ್ರಾಮಗಳ ನಡುವಿನ ಸೇತುವೆ ನಿರ್ಮಾಣಕ್ಕೆ ಅಧಿಕಾರಗಳ ತಂಡದೊಂದಿಗೆ ಶಾಸಕ ಎ.ಟಿ.ರಾಮಸ್ವಾಮಿ ಶನಿವಾರ ಸ್ಥಳಪರಿಶೀಲನೆ ನಡೆಸಿದರು.
ಇದರಿಂದಾಗಿ, ದಶಕಗಳ ಕನಸಾಗಿದ್ದ ವೇದಗ್ರಾಮ ಬಸವಾಪಟ್ಟಣ ಹಾಗೂ ನಾದ ಗ್ರಾಮ ರುದ್ರಪಟ್ಟಣ ನಡುವೆ ಹರಿಯುವ ಕಾವೇರಿ ನದಿಗೆ ಸೇತುವೆ ನಿರ್ಮಾಣ ಕುರಿತು ಜನರಲ್ಲಿ ಹೊಸ ಆಸೆಯನ್ನು ಚಿಗುರಿದೆ.
ಐತಿಹಾಸಿಕ ಗ್ರಾಮಗಳ ಜನರು ಪರಸ್ಪರ ಸಂಪರ್ಕಿಸಬೇಕಾದರೆ ಜನರು 12 ಕಿ.ಮೀ ಸುತ್ತಿ ರಾಮನಾಥಪುರದ ಮೂಲಕ ಬರಬೇಕಾಗಿತ್ತು. ರಾಮಕೃಷ್ಣ ಹೆಗ್ಗಡೆ ಮುಖ್ಯಮಂತ್ರಿ ಆಗಿದ್ದಾಗ ಸೇತುವೆ ನಿರ್ಮಾಣಕ್ಕೆ ಭರವಸೆ ಸಿಕ್ಕಿತ್ತು. 2006 ರಲ್ಲಿ ಕುಮಾರಸ್ವಾಮಿ ಮುಖ್ಯಂತ್ರಿಯಾಗಿದ್ದಾಗ ಮತ್ತು 2017ರಲ್ಲಿ ಎ.ಮಂಜು ಸಚಿವರಾಗಿದ್ದಾಗ ಶಿಲಾನ್ಯಾಸ ನೆರವೇರಿತ್ತು.
ಬಸವಾಪಟ್ಟಣ ಕಡೆಯಿಂದ ನದಿವರೆಗೆ ಸುಮಾರು 400 ಮೀ, ರುದ್ರಪಟ್ಟಣ ಕಡೆಯಿಂದ 900 ಮೀ ರಸ್ತೆ ನಿರ್ಮಾಣ ಹಾಗೂ 216 ಮೀ ಸೇತುವೆ ನಿರ್ಮಿಸಲು ನೀಲನಕ್ಷೆ ತಯಾರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗ್ರಾಮಗಳ ನಡುವೆ ಇರುವ ಜಮೀನನ್ನು ಭೂಸ್ವಾದೀನ ಮಾಡಿಕೊಳ್ಳಲು ಮುಂದಾಗಿದ್ದು ಎರಡು ಗ್ರಾಮಗಳ ಜನರ ಅಭಿಪ್ರಾಯವನ್ನು ಕೇಳಲಾಯಿತು.
ಸ್ಥಳಪರಿಶೀಲನೆ ವೇಳೆ ಕೆಆರ್ಡಿಸಿಎಲ್ ನ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ,ಸಹಾಯಕ ಎಂಜಿನಿಯರ್ ರವಿಕುಮಾರ್ ಗುತ್ತಿಗೆದಾರ ವಿಶ್ವೇಶ್ವರನಾಯಕ್, ಬಸವಾಪಟ್ಟಣ ಗ್ರಾಮಸ್ಥ ಜೆ. ನಾಗರಾಜ, ಬಿ.ಸಿ.ವಿರೇಶ್ ವಿರೂಪಾಕ್ಷ, ಕುಮಾರೇಗೌಡ, ಮಂಜೇಗೌಡ, ಶಿವೇಗೌಡ, ಶ್ರೀನಿವಾಸ್,ರವಿಕುಮಾರ್, ಶೇಖರ್ ರುದ್ರಪಟ್ಟಣ ಗ್ರಾಮಸ್ಥರಾದ ಶೇಖರ್ , ಗಿರೀಶ್, ಹರೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.