ADVERTISEMENT

ಚಹಾ, ಸಿಹಿ ಹಂಚಿ ಸಂಭ್ರಮ

ಎಲ್‌ಇಡಿ ಪರದೆಯಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 30 ಮೇ 2019, 15:30 IST
Last Updated 30 ಮೇ 2019, 15:30 IST
ಹಾಸನದ ಜನತಾ ಬಜಾರ್‌ ಬಳಿ ಬಿಜೆಪಿ ವತಿಯಿಂದ ನಾಗರಿಕರಿಗೆ ಚಹಾ ವಿತರಿಸುವ ಮೂಲಕ ಸಂಭ್ರಮಿಸಲಾಯಿತು.
ಹಾಸನದ ಜನತಾ ಬಜಾರ್‌ ಬಳಿ ಬಿಜೆಪಿ ವತಿಯಿಂದ ನಾಗರಿಕರಿಗೆ ಚಹಾ ವಿತರಿಸುವ ಮೂಲಕ ಸಂಭ್ರಮಿಸಲಾಯಿತು.   

ಹಾಸನ: ಎರಡನೇ ಅವಧಿಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರು ಎಲ್ಇಡಿ ಪರದೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು.

ನಗರದ ಹೇಮಾವತಿ ಪ್ರತಿಮೆ, ಸಹ್ಯಾದ್ರಿ ಚಿತ್ರಮಂದಿರದ ಬಳಿ ಅಳವಡಿಸಿದ್ದ ಎಲ್‌ಇಡಿ ಪರದೆಯಲ್ಲಿ ಸಂಜೆ 7 ಗಂಟೆಗೆ ಗೋಧೂಳಿ ಲಗ್ನದಲ್ಲಿ ಮೋದಿ ಪ್ರಮಾಣ ವಚನ ಸ್ವೀಕರಿಸಿದ ದೃಶ್ಯ ಪ್ರಸಾರವಾಗುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಕರ್ನಾಟಕದ ಸಂಸದರಾದ ಸದಾನಂದಗೌಡ, ಪ್ರಹ್ಲಾದ ಜೋಷಿ, ಸುರೇಶ್‌ ಅಂಗಡಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಸಂತಸ ಪಟ್ಟರು.

ನರೇಂದ್ರ ಮೋದಿ ಹಾಗೂ ಅಮಿತ್‌ ಷಾ ಪರವಾಗಿ ಜಯಘೋಷಗಳು ಮೊಳಗಿದವು. ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ, ಕೇಕ್‌ ಕತ್ತರಿಸಿದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು. ನಾಗರಿಕರು ಸಹ ಸಂಭ್ರಮದ ಕ್ಷಣದಲ್ಲಿ ಭಾಗಿಯಾದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ ಮಾತನಾಡಿ, ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಆಯ್ಕೆಯಾಗುವ ವಿಶ್ವನಾಯಕರಾಗಿದ್ದಾರೆ. ಇದೊಂದು ಐತಿಹಾಸಿಕ ಸಾಧನೆಯಾಗಿದ್ದು, ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ನಿವಾರಣೆಗೆ ಹಲವು ಕ್ರಮಕ ಕೈಗೊಂಡಿದ್ದಾರೆ. ಸಾಮಾಜಿಕ ಸಮಾನತೆಗೆ ಕೈಗೊಂಡ ನಿರ್ಣಯಗಳು ಜನರ ಮೆಚ್ಚುಗೆ ಗಳಿಸಿವೆ ಎಂದು ನುಡಿದರು.ಇದಕ್ಕೂ ಮುನ್ನ ಹಿರಿಯರಾದ ಹರಿಹರಪುರ ಶ್ರೀಧರ್‌ ಅವರ ಸಮ್ಮುಖದಲ್ಲಿ ರಾಷ್ಟ್ರ ಯಜ್ಞ ನೆರವೇರಿತು.ಗಾಂಧಿ ಬಜಾರ್‌ನ ವಿರೂಪಾಕ್ಷ ದೇವಸ್ಥಾನ ಬಳಿ ಕಾರ್ಯಕರ್ತರು ನಾಗರಿಕರಿಗೆ ಚಹಾ ವಿತರಿಸಿದರು.ನಗರದ ಎಂ.ಜಿ. ರಸ್ತೆಯ ಐನೆಟ್‌ ಬಳಿ ಬಿಜೆಪಿ ಕಾರ್ಯಕರ್ತರು ಎಲ್‌ಇಡಿ ಪರದೆ ಹಾಕಲಾಗಿತ್ತು. ಬಳಿಕ ಎಲ್ಲರಿಗೂ ಜಿಲೆಬಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಘಟಕ ಅಧ್ಯಕ್ಷ ಶೋಭನ್‌ ಬಾಬು, ಮುಖಂಡರಾದ ಪ್ರಸನ್ನಕುಮಾರ್, ಎಚ್‌.ಎನ್‌.ನಾಗೇಶ್‌, ವೇಣುಕುಮಾರ್, ಶೇಷಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.