ADVERTISEMENT

ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ: ಜಿಲ್ಲಾಧಿಕಾರಿ ಗಿರೀಶ್‌

ವಿಶ್ವಕರ್ಮ ಜಯಂತಿಯಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 13:09 IST
Last Updated 17 ಸೆಪ್ಟೆಂಬರ್ 2020, 13:09 IST
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.   

ಹಾಸನ: ಕುಶಲಕರ್ಮಿಗಳ ಕಾರ್ಯವನ್ನು ಎಲ್ಲರೂ ಮಾಡಲಾಗುವುದಿಲ್ಲ. ಆದರೆ, ಕಾಲಮಾನ ಬದಲಾವಣೆ ಆಗುತ್ತಿರುವಂತೆಯೇ ಎಲ್ಲರೂ ತಾವು ಮಾಡುವ ಕೆಲಸವನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮರು ದೇವಶಿಲ್ಪಿ, ಸತ್ಯಯುಗದಲ್ಲಿ ಸ್ವರ್ಗವನ್ನು ಹಾಗೂ ದ್ವಾಪರಾ ಯುಗದಲ್ಲಿ ಶ್ರೀ ಕೃಷ್ಣನ ದ್ವಾರಕಿಯನ್ನು ನಿರ್ಮಿಸಿದವರು. ಸಮಾಜಕ್ಕೆ ಸಮುದಾಯದವರ ಕೊಡುಗೆ ಅಪಾರ ಎಂದರು.

ಬದಲಾವಣೆ ಪ್ರಕೃತಿಯ ನಿಯಮ. ಅದೇ ರೀತಿ ನಾವೂ ಸಹ ಹೊಂದಿಕೊಂಡು ಜೀವನದಲ್ಲಿ ಅಭಿವೃದ್ಧಿ ಸಾಧಿಸುವುದು ಅವಶ್ಯಕ. ಸರ್ಕಾರ ಸಮುದಾಯದ ಏಳಿಗೆಗಾಗಿ ಜಾರಿಗೆ ತಂದಿರುವ ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ವಿಶ್ವಕರ್ಮ ಅವರು ವಿಶ್ವದ ವಾಸ್ತುಶಿಲ್ಪಿ. ಪುರಾಣದಲ್ಲಿ ಉಲ್ಲೇಖವಾಗಿರುವಂತೆ ಹಲವಾರು ಮಹಾ ನಗರಗಳನ್ನು ನಿರ್ಮಿಸಿದವರು.

ಪುಷ್ಪಕ ವಿಮಾನ ನಿರ್ಮಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲತ್ತದೆ. ಯಾವುದೇ ವಸ್ತುವಿಗೆ ವಿಶೇಷ ರೂಪವನ್ನು ನೀಡುವ ಕೌಶಲ ವಿಶ್ವಕರ್ಮರಿಗೆ ಇತ್ತು ಎಂದು ನುಡಿದರು.

ಕಾಳಿಕಾಂಬ ದೇವಾಲಯದ ಅರ್ಚಕ ರವೀಂದ್ರ ಶರ್ಮ ಅವರು ವಿಶ್ವಕರ್ಮ ಅವರ ಬಗ್ಗೆ ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ರಾಜ್ಯ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಇ. ವಾಸುದೇವ, ಜಿಲ್ಲಾಧ್ಯಕ್ಷ ಜಿ. ಕುಮಾರ್, ಮುಖಂಡರಾದ ರಾಘವೇಂದ್ರ, ಎಚ್.ವಿ. ಹರೀಶ್, ಬಿ.ಸಿ. ಶಂಕರಾಚಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.