ಹಾಸನ: ‘ಜಾತಿ ಮುಂದಿಟ್ಟುಕೊಂಡು ರಾಜ್ಯದ ಮಠಾಧೀಶರು ಬಿ.ಎಸ್.ಯಡಿಯೂರಪ್ಪ ಅವರನ್ನೇ ಸಿ.ಎಂ ಸ್ಥಾನದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಬೀದಿಗಿಳಿದಿರುವುದು ನಾಚಿಕೆಗೇಡಿನ ಸಂಗತಿ' ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣದಾಸ್ ಹೇಳಿದರು.
‘ಮೂರು ಬಾರಿ ವಾಮ ಮಾರ್ಗದಿಂದಲೇ ಸಿ.ಎಂ ಸ್ಥಾನಕ್ಕೇರಿದ ಯಡಿಯೂರಪ್ಪ ರಾಜ್ಯದ ರಾಜಕೀಯವನ್ನು ಕಲುಷಿತಗೊಳಿಸಿದರು. ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಆಪರೇಷನ್ ಕಮಲ ಮೂಲಕಮುಖ್ಯಮಂತ್ರಿಯಾದರು. ಅವರ ಈ ಕೃತ್ಯಕ್ಕೆ ಬಿಜೆಪಿ ಬೆನ್ನೆಲುಬಾಗಿ ನಿಂತಿದೆ’ ಎಂದುಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
‘ರಾಜ್ಯದಲ್ಲಿ ಕೋವಿಡ್ನಿಂದ ಜನ ತತ್ತರಿಸಿ ಹೋಗಿದ್ದಾರೆ. ಬಡವರು, ಕೂಲಿ ಕಾರ್ಮಿಕರು ತುತ್ತುಕೂಳಿಗಾಗಿ ಪರಿತಪಿಸುತ್ತಿದ್ದಾರೆ. ಜತೆಗೆ ಇಂಧನ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳಬೆಲೆ ಗಗನಕ್ಕೆ ಏರಿದೆ. ಲಾಕ್ಡೌನ್ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.ಜನ ಸಾಮಾನ್ಯರ ಈ ಯಾವುದೇ ಸಮಸ್ಯೆಗಳಿಗೆ ಧ್ವನಿ ಎತ್ತದ ಮಠಾಧೀಶರು ಈಗಯಡಿಯೂರಪ್ಪ ಪರವಾಗಿ ಒತ್ತಾಯ ಮಾಡುತ್ತಿರುವುದು ನೈತಿಕ ಮೌಲ್ಯಗಳ ಅಧಃಪತನದ ದ್ಯೋತಕ’ ಎಂದು ಆರೋಪಿಸಿದರು.
‘ಭೂ ಕಬಳಿಕೆ ಪ್ರಕರಣಗಳಲ್ಲಿ ಯಡಿಯೂರಪ್ಪ ಭಾಗಿಯಾಗಿರುವ ಆರೋಪಗಳಿವೆ. ಮಗ ವಿಜಯೇಂದ್ರ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ. ಹೀಗಿರುವಾಗಮಠಾಧೀಶರು ಈ ವಿಚಾರದ ಬಗ್ಗೆ ತುಟಿ ಬಿಚ್ಚದೆ, ಸಿ.ಎಂ ರಕ್ಷಣೆಗೆ ನಿಂತಿದ್ದಾರೆ. ಇವರು ರಾಜ್ಯದಜನತೆಗೆ ಯಾವ ಸಂದೇಶ ನೀಡಲು ಹೊರಟಿದ್ದಾರೆ. ಇದು ತುಂಬಾ ಅಪಯಕಾರಿ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
‘ತಮ್ಮ ಮಠಗಳಿಗೆ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿರುವ ಸ್ವಾಮೀಜಿಗಳುಇನ್ನಷ್ಟು ಲಾಭ ಮಾಡಿಕೊಳ್ಳಲು ಮುಂದೆ ಬಂದಿದ್ದಾರೆ. ಯಡಿಯೂರಪ್ಪ ಸಿ.ಎಂ ಆಗಲುಇನ್ನಾವುದೇ ಜಾತಿ, ಜನಾಂಗದ ಬೆಂಬಲ ಇರಲಿಲ್ಲವೇ’ ಎಂದು ಪ್ರಶ್ನಿಸಿದರು.
ಮಠಾಧೀಶರು ಇಂತಹ ಅನುಚಿತ ನಡವಳಿಕೆಯಿಂದ ಹಿಂದೆ ಸರಿಯದಿದ್ದರೆ ದಲಿತ ಸಂಘಟನೆಗಳ ಒಕ್ಕೂಟದಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಂಬುಗ ಮಲ್ಲೇಶ್, ನಾಗರಾಜ್ ಹೆತ್ತೂರು, ಸಮತಾಸೈನಿಕ ದಳದ ಜಿಲ್ಲಾ ಅಧ್ಯಕ್ಷ ಸತೀಶ್, ದಲಿತ ಮಾನವ ಹಕ್ಕುಗಳ ವೇದಿಕೆ ಸಂಚಾಲಕಆರ್.ಮರಿಜೋಸೆಫ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.