ADVERTISEMENT

ನಗರಸಭೆ ತೆರಿಗೆ ಸಕಾಲದಲ್ಲಿ ಸಂಗ್ರಹಿಸಿ

ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿ.ಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 13:24 IST
Last Updated 5 ಡಿಸೆಂಬರ್ 2020, 13:24 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ನಗರಸಭೆ ಅಧಿಕಾರಿಗಳ ಸಭೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ನಗರಸಭೆ ಅಧಿಕಾರಿಗಳ ಸಭೆ ನಡೆಸಿದರು.   

ಹಾಸನ: ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ಇತರ ತೆರಿಗೆಗಳನ್ನು ನಗರಸಭೆ ಕಂದಾಯ ಅಧಿಕಾರಿಗಳು ಸಕಾಲದಲ್ಲಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ನೀಡಿದರು. ‌

ನಗರಸಭೆ ಯೋಜನೆಗಳ ಅನುಷ್ಠಾನದ ಬಗ್ಗೆ ಶನಿವಾರ ಪರಿಶೀಲನಾ ಸಭೆ ನಡೆಸಿದ ಅವರು, ಪಾರದರ್ಶಕ ಕಾಯ್ದೆ ಅನ್ವಯ ಎಲ್ಲಾ ಕಾರ್ಯಗಳನ್ನು ನಡೆಸಬೇಕು. ಕಸ ಸಂಗ್ರಹ, ವರ್ಗೀಕರಣ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಪಡೆಯುವಂತೆ ಹೇಳಿದರು.

ಕಸ ಸಂಗ್ರಹಣೆಯ ವೈಜ್ಞಾನಿಕ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಪ್ರತಿ ಮನೆಗೂ ಕರಪತ್ರ ಹಂಚಬೇಕು ಹಾಗೂ ಸ್ಟೀಕರ್‌ಗಳನ್ನು ಮುದ್ರಿಸಿ ನೀಡಬೇಕು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಪರಿವೀಕ್ಷಕರು, ಸಮುದಾಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ನಿಯೋಜಿಸಿ, ಕಸ ಬೇರ್ಪಡಿಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ನೀರು ಪೂರೈಕೆ ವ್ಯವಸ್ಥೆ ಸರ್ಮಪಕವಾಗಿರಬೇಕು ಹಾಗೂ ಪೋಲಾಗದಂತೆ ಗಮನಹರಿಸಬೇಕು. ವಿದ್ಯುತ್ ಸಂಪರ್ಕ
ವ್ಯವಸ್ಥೆಗಳು ಹಾಗೂ ಇತರ ಕಾಮಗಾರಿಗಳನ್ನು ಟೆಂಡರ್ ಕರೆದು ಕೆಲಸ ನಿರ್ವಹಿಸಬೇಕು ಎಂದರು.

ಅಮೃತ್‌ ಯೋಜನೆ ತ್ವರಿತವಾಗಿ ಜಾರಿಯಾಗಬೇಕು, ಕೊಳವೆ ಬಾವಿ ಕೊರೆಯುವುದನ್ನು ತಪ್ಪಿಸಿ ಹೇಮಾವತಿ ನದಿ ನೀರು ಎಲ್ಲಾ ವಾರ್ಡ್‍ಗಳಿಗೆ ಪೂರೈಕೆ ಆಗುವಂತೆ ಯೋಜಿತ ಕ್ರಮಗಳನ್ನು ಅನುಷ್ಠಾನ ಮಾಡಬೇಕು. ಮನೆ, ವಾಣಿಜ್ಯ ಮಳಿಗೆ ಪರವಾನಗಿ ಶುಲ್ಕವನ್ನು ಚದರಡಿ ಆಧಾರದ ಮೇಲೆ ನಿಗದಿ ಪಡಿಸಬೇಕು. ಅಪಾರ್ಟ್‍ಮೆಂಟ್‌ಗಳ ಒಟ್ಟು ನಿರ್ಮಾಣ ವಿಸ್ತೀರ್ಣದ ಅಳತೆ ಮೇಲೆ ತೆರಿಗೆ ಪಡೆಯಬೇಕು ಎಂದರು.

ನಗರಸಭೆ ವತಿಯಿಂದ ಕೈಗೊಂಡ ತುರ್ತು ಕಾಮಗಾರಿಗಳು ಹಾಗೂ ಸಾಂದರ್ಭಿಕ ವೆಚ್ಚಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಎಂಜಿನಿಯರ್‌ಗಳು ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.