
ಹಾಸನ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ , ಹಿಂದುತ್ವ ಪರ ಸಂಘಟನೆ ಹಾಗೂ ಬಿಜೆಪಿ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಸಾಗಿದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಎನ್.ಆರ್. ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿದರು. ಗೋರಕ್ಷಣೆಯನ್ನು ಬಲಪಡಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಕಾಯ್ದೆ ತಿದ್ದುಪಡಿ ಮಾಡುತ್ತಿದ್ದು, ಇದರಿಂದ ಗೋ ಸಾಗಣೆ ಸಂದರ್ಭ ಸರ್ಕಾರವು ವಶಪಡಿಸಿಕೊಂಡ ವಾಹನಗಳನ್ನು ಬ್ಯಾಂಕ್ ಗ್ಯಾರಂಟಿ ಇಲ್ಲದೇ ತಾತ್ಕಾಲಿಕ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಅಕ್ರಮ ಗೋ ಸಾಗಾಟಗಾರರು ಮತ್ತು ಗೋ ಹಂತಕರಿಗೆ ಅಭಯ ನೀಡುವಂತಿದೆ’ ಎಂದು ದೂರಿದರು.
‘2021ರಲ್ಲಿ ಕಾಯ್ದೆ ಜಾರಿಯಾದ ನಂತರ ಈ ಕ್ರೂರತೆ ಒಂದಿಷ್ಟು ನಿಯಂತ್ರಣಕ್ಕೆ ಬಂದರೂ, ಪರಿಣಾಮಕಾರಿಯಾಗಿ ಕಾಯ್ದೆ ಜಾರಿ ಆಗದ್ದರಿಂದ ಕೆಲವು ಪ್ರದೇಶಗಳಲ್ಲಿ ಇನ್ನೂ ದುರ್ಬಳಕೆ ಮುಂದುವರಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕೇವಲ ಜಾನುವಾರು ವಧೆ ನಿಷೇಧಿಸುವುದಷ್ಟೇ ಅಲ್ಲದೇ, ಜಾನುವಾರು ಸುರಕ್ಷಿತ ಸಾಗಾಟ, ಸಂರಕ್ಷಣೆ ಮತ್ತು ಕ್ರೂರತೆಯಿಂದ ರಕ್ಷಿಸುವ ಉದ್ದೇಶವೂ ಈ ಕಾಯ್ದೆಯಲ್ಲಿ ಅಡಕವಾಗಿದೆ. ಈಗ ಕಾಂಗ್ರೆಸ್ ಸರ್ಕಾರದಿಂದ ಗೋರಕ್ಷಣೆ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಸಂವಿಧಾನದ ಮೂಲಭೂತ ಆಶಯಕ್ಕೂ ವಿರುದ್ಧವಾಗಿದೆ’ ಎಂದು ಆರೋಪಿಸಿದರು.
ಗೋವು ಭಾವೈಕ್ಯ ಮತ್ತು ಹಿಂದೂ ಧರ್ಮದ ಸಂಕೇತ. ಗೋವನ್ನು ಪೂಜಿಸಲಾಗುತ್ತದೆ. ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಗೋವುಗಳ ರಕ್ಷಣೆ ಮಾಡಲು ಹೋರಾಟ ಮಾಡುವವರನ್ನು ನಾನಾ ಪ್ರಕರಣದಡಿ ಬಂಧಿಸಲಾಗುತ್ತಿದೆ’ ಎಂದು ದೂರಿದರು.
ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಪ್ರಸನ್ನ ಕುಮಾರ್, ಐ ನೆಟ್ ವಿಜಯ್ ಕುಮಾರ್, ವೇದಾವತಿ, ಲೋಕೇಶ್, ಬಜರಂಗದಳದ ಸಂಯೋಜಕ ಅಭಿಷೇಕ, ವಿಕಾಸ್, ಮಂಜು, ಶರತ್, ಪ್ರಣವ್, ವಿಕಾಸ್, ಲಾವಣ್ಯ ಅನೂಪ್, ಅನು, ಇತರರು ಭಾಗವಹಿಸಿದ್ದರು.
‘ಸರ್ಕಾರದಿಂದ ಹಿಂದೂ ವಿರೋಧಿ ಕೆಲಸ’
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಮ್ಯುನಿಸ್ಟ್ ಮಾನಸಿಕತೆಯಲ್ಲಿ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಹಿರಿಯರಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ವಿರೋಧಿ ಕೆಲಸ ಮಾಡುತ್ತಿದ್ದು ಒಂದಾಗಿ ಬಾಳೋಣ ಎಂದು ಕರೆ ಕೊಡುವ ಮುಖ್ಯಮಂತ್ರಿ ಹಿಂದೂ ವಿರೋಧಿ ನಡೆ ಮುಂದುವರಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ನ ಮಹಿಪಾಲ್ ದೂರಿದರು. ಇತ್ತೀಚಿಗೆ ಧರ್ಮಸ್ಥಳ ಪ್ರಕರಣದಲ್ಲಿಯೂ ಹಿಂದೂ ಧರ್ಮಕ್ಕೆ ಧಕ್ಕೆಯಾಗುವ ರೀತಿ ಸರ್ಕಾರ ನಡೆದುಕೊಂಡಿದೆ. ಈ ಮೂಲಕ ಭಕ್ತರ ಸಂಖ್ಯೆ ಕ್ಷೀಣಿಸುವಂತೆ ಮಾಡಲಾಗಿದೆ. ಬೆಳ್ತಂಗಡಿಯಲ್ಲಿ ಮತಾಂತರಕ್ಕೆ ಸಹಕಾರ ದೊರೆಯುವಂತೆ ಮಾಡಲಾಗಿದೆ. ಇದೀಗ ಗೋ ರಕ್ಷಣೆ ಕಾಯ್ದೆಗೆ ಶಕ್ತಿ ಕುಂದಿಸುವ ಕೆಲಸ ಮಾಡಲು ಹೊರಟಿರುವುದು ಖಂಡನೀಯ ಎಂದರು. ರಾಜ್ಯ ಸರ್ಕಾರ ಜಾನುವಾರ ಹತ್ಯೆ ಪ್ರತಿಬಂಧಕ ಕಾಯ್ದೆ ತಿದ್ದುಪಡಿ ಮಾಡಿದರೆ ಮನೆ ಮನೆಗೆ ತೆರಳಿ ಆಂದೋಲನದ ರೀತಿ ವಿಶ್ವ ಹಿಂದೂ ಪರಿಷತ್ ಕೆಲಸ ಮಾಡಲಿದೆ. ವಿಧಾನಸೌಧಕ್ಕೆ ಹಸುಗಳನ್ನು ನುಗ್ಗಿಸಿ ಕಾಯ್ದೆ ತಿದ್ದುಪಡಿ ಖಂಡಿಸಲಾಗುವುದು ಎಂದು ಎಚ್ಚರಿಸಿದರು.
ಒಂದು ಸಮುದಾಯದ ತುಷ್ಟೀಕರಣ’
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದು ಸಮುದಾಯವನ್ನು ತುಷ್ಟೀಕರಣ ಮಾಡಲು ಹೊರಟಿದೆ. ಗೋ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹಿಂದೂ ಸಮಾಜದ ಮಠಾಧೀಶರು ಹಾಗೂ ಮುಖಂಡರು ಹೋರಾಟದ ಪ್ರಯತ್ನದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿ ಮಾಡಲಾಗಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದ್ದು ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ’ ಎಂದು ವಿಶ್ವ ಹಿಂದೂ ಪರಿಷತ್ನ ಲೋಕೇಶ್ ಹೇಳಿದರು. ‘ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದೇ ತಕ್ಷಣ ಹಿಂಪಡೆಯಬೇಕು. ಗೋವುಗಳ ರಕ್ಷಣೆಯು ನಮ್ಮ ಧರ್ಮ ಸಂಸ್ಕೃತಿ ಮತ್ತು ಸಂವಿಧಾನದ ಕರ್ತವ್ಯ. ಸರ್ಕಾರವೂ ಈ ಹೊಣೆಗಾರಿಕೆಯನ್ನು ಗಂಭೀರವಾಗಿ ಪಾಲಿಸಬೇಕು. ನಮ್ಮ ಮನವಿಗೆ ಸ್ಪಂದಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.