
ನುಗ್ಗೇಹಳ್ಳಿ: ಸಹಕಾರಿ ಕ್ಷೇತ್ರದಿಂದ ಮಾತ್ರ ರೈತರ ಉಳಿವು ಸಾಧ್ಯ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುತ್ತಿರುವುದು ಸಹಕಾರಿ ಕ್ಷೇತ್ರ ಮಾತ್ರ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದರು.
ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಯೋಜಿಸಿದ್ದ ರೈತರಿಗೆ ಹೊಸ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಇನ್ನಿತರ ಬ್ಯಾಂಕುಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿಲ್ಲ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ನೆರವಾಗಲು ಸಹಕಾರಿ ಕ್ಷೇತ್ರದ ಜಿಲ್ಲಾ ಬ್ಯಾಂಕ್ ನೆರವಿನೊಂದಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಈಗಾಗಲೇ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2214 ರೈತರಿಗೆ ₹15.50 ಕೋಟಿ ಸಾಲ ನೀಡಲಾಗಿದೆ. ಇದರ ಜೊತೆಗೆ ಹೊಸದಾಗಿ 42 ರೈತರಿಗೆ ₹15 ಲಕ್ಷ ಸಾಲ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲೂ ಈ ಭಾಗದ ಇನ್ನುಳಿದ ರೈತರಿಗೆ ಹೆಚ್ಚಿನ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ಭಾಗದ ಹಿರಿಯ ಮುಖಂಡರಾದ ತೋಟಿ ನಾಗರಾಜ್ ಅವರನ್ನು ತಾಲ್ಲೂಕು ಟಿಎಪಿಎಂಎಸ್ ಅಧ್ಯಕ್ಷರನ್ನಾಗಿ ಮುಂದಿನ ಅವಧಿಯಲ್ಲಿ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಕೃಷಿ ಪತ್ತಿನ ಅಧ್ಯಕ್ಷ ವಿಕ್ಟರ್, ಕಾರ್ಯನಿರ್ವಣಧಿಕಾರಿ ವಿನಯ್ ಡಿ, ಉಪಾಧ್ಯಕ್ಷ ಚಂದ್ರಣ್ಣ, ಮುಖಂಡರಾದ ಎನ್.ಡಿ. ಶಿವಪ್ಪ, ಪಟೇಲ್ ಕುಮಾರ್, ಎಚ್.ಬಿ. ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ಎನ್.ಡಿ ಶಂಕರ್, ಎನ್.ಆರ್ ಶಿವಕುಮಾರ್, ತೋಪೇಗೌಡ, ಸೇರಿದಂತೆ ಸಹಕಾರ ಸಂಘದ ನಿರ್ದೇಶಕರುಗಳು ಹಾಗೂ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.