ಹಾಸನ: ಕೋವಿಡ್ 19 ರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದ ನಾಲ್ವರು ಪೊಲೀಸರಿಗೆ ಬುಧವಾರ ಹೂಮಳೆ ಸುರಿಸಿ ಬೀಳ್ಕೊಡಲಾಯಿತು.
ಹಿಮ್ಸ್ ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಹೊಳೆನರಸೀಪುರದ ಸಬ್ ಇನ್ಸ್ಪೆಕ್ಟರ್, ಮೂವರು ಕಾನ್ಸ್ಟೆಬಲ್ಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕ ರವಿಕುಮಾರ್ ಹಾಗೂ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಅವರು ಪುಷ್ಪವೃಷ್ಟಿ ಮಾಡಿ, ಧೈರ್ಯ ತುಂಬಿ ಹಾರೈಸಿದರು.
ನಿಪ್ಪಾಣಿ ಮತ್ತು ತಮಿಳುನಾಡು ಗಡಿ ಭಾಗದ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಈ ಪೊಲೀಸರಿಗೆ ಸೋಂಕು ತಗುಲಿತ್ತು. ಏಳು ದಿನದ ಬಳಿಕ ಗಂಟಲು ದ್ರವ ಪರೀಕ್ಷಿಸಿ ನೆಗೆಟಿವ್ ಬಂದಿರುವುದರಿಂದ ಬಿಡುಗಡೆ ಮಾಡಲಾಗಿದೆ. ಹದಿನಾಲ್ಕು ದಿನ ಹೋಂ ಕ್ವಾರಂಟೈನ್ ಇರುತ್ತಾರೆ.
‘ಜಿಲ್ಲೆಯಲ್ಲಿ 183 ಕೋವಿಡ್ 19 ಪ್ರಕರಣ ವರದಿಯಾಗಿದ್ದು, ಇದರಲ್ಲಿ ಈಗಾಗಲೇ 59 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೊರೊನಾ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಸಾರ್ವಜನಿಕರು ಗಾಬರಿ ಪಡುವುದು ಬೇಡ. ಸೋಂಕಿತರು ಕಳಂಕಿತರಲ್ಲ. ಕಾಯಿಲೆಯಿಂದ ಗುಣಮುಖರಾಗಿ ಬಂದಿರುವ ಸಾಮಾನ್ಯ ವ್ಯಕ್ತಿ ಅಂದುಕೊಳ್ಳಬೇಕು. ತಾರತಮ್ಯ ಮಾಡಬಾರದು’ ಎಂದು ಡಿಸಿ ಗಿರೀಶ್ ಮನವಿ ಮಾಡಿದರು.
‘ಬುಧವಾರ ಹೊಸದಾಗಿ ಮೂರು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಎರಡನೇ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು. ಒಬ್ಬರು ಮನೆಗೆ ಹೋಗಿದ್ದರು. ಎಲ್ಲರನ್ನು ಐಸೋಲೇಷನ್ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. ಸೋಂಕಿತರ ಗಂಟಲು ದ್ರವದ ಮಾದರಿಯನ್ನ ಬಹಳ ಹಿಂದೆಯೇ ಸಂಗ್ರಹಿಸಲಾಗಿತ್ತು. ವರದಿ ಇಂದು ಬಂದಿದೆ’ ಎಂದರು.
‘ಆಸ್ಪತ್ರೆಯಲ್ಲಿ ಇದ್ದೇವೆ ಅನಿಸಲಿಲ್ಲ. ಮನೆಯಲ್ಲೇ ಇದ್ದೇವೆ ಎಂಬಂತೆ ಇದ್ದೇವು. ಕೋವಿಡ್ಗೆ ಹೆದರುವ ಅವಶ್ಯಕತೆ ಇಲ್ಲ.ಆರಂಭದಲ್ಲಿ ತುಂಬಾ ಭಯವಾಯಿತು. ಒಂದೆರೆಡು ದಿನದಲ್ಲಿ ನಂತರಭಯ ಹೋಯಿತು. ಎಸ್ಪಿ, ಐಜಿಪಿ, ಡಿಜಿಪಿ ಅವರು ಬಂದು ಧೈರ್ಯ ಹೇಳಿದರು. ಆಸ್ಪತ್ರೆ ಸಿಬ್ಬಂದಿ ಚೆನ್ನಾಗಿ ನೋಡಿಕೊಂಡರು’ ಎಂದು ಗುಣಮುಖರಾದ ಪೊಲೀಸ್ ಸಿಬ್ಬಂದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.