ADVERTISEMENT

ಬೆಳೆ ವಿಮೆ ಆ.16 ರೊಳಗೆ ಪಾವತಿಸಿ: ರೈತರಿಗೆ ಸಿ.ಎನ್. ಬಾಲಕೃಷ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 13:03 IST
Last Updated 11 ಆಗಸ್ಟ್ 2023, 13:03 IST
ಚನ್ನರಾಯಪಟ್ಟಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು.
ಚನ್ನರಾಯಪಟ್ಟಣದಲ್ಲಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು.    

ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ರಾಗಿ ಮತ್ತು ಮುಸುಕಿನ ಜೋಳದ ಬಿತ್ತನೆ ಕಾರ್ಯ ಶೇ 85 ರಷ್ಟು ಪೂರ್ಣಗೊಂಡಿದ್ದು, ಇನ್ನೊಂದು ವಾರದಲ್ಲಿ ಮಳೆಯಾಗದಿದ್ದಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ತಾಲ್ಲೂಕು ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಮುಂಗಾರು ಹಂಗಾಮಿನ ಮಳೆ, ಬೆಳೆ ಪರಿಸ್ಥಿತಿ ಮತ್ತು ಬೆಳೆವಿಮೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬೆಳೆ ವಿಮಾ ಯೋಜನೆಯ ಅನುಕೂಲವನ್ನು ರೈತರಿಗೆ ಒದಗಿಸಲು ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ರಾಗಿ ಬೆಳೆಗೆ ವಿಮೆ ಮಾಡಿಸಲು ಇದೇ ತಿಂಗಳು 16 ಕೊನೆಯ ದಿನಾಂಕವಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ಹೆಚ್ಚಿನ ಪ್ರಚಾರ ನೀಡುವ ಮೂಲಕ ಬೆಳೆವಿಮೆ ಪಾವತಿಸಲು ರೈತರಿಗೆ ತಿಳಿಹೇಳಬೇಕು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣೆ ಮಾಡಿಸಬೇಕು ಎಂದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ರಾಜಸುಲೋಚನಾ ಮಾತನಾಡಿ, ಪಿಎಂಕಿಸಾನ್ ಯೋಜನೆಯಡಿ ತಾಲ್ಲೂಕಿನಲ್ಲಿ ಇನ್ನೂ 8,996 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಇದೆ.

ADVERTISEMENT

ಸಹಾಯಕ ಕೃಷಿನಿರ್ದೇಶಕ ಎಂ.ಎಸ್. ಜನಾರ್ದನ್ ಮಾತನಾಡಿ, ಬೆಳೆಸಮೀಕ್ಷೆ ವರದಿಯು ಬೆಳೆವಿಮೆ ಮತ್ತು ಬೆಂಬಲ ಬೆಲೆಯ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಜಾಗರೂಕತೆಯಿಂದ ಬೆಳೆ ಸಮೀಕ್ಷೆ ಕೈಗೊಳ್ಳಬೇಕು ಎಂದು ತಿಳಿಸಿದರು.

ಹಾಸನ ಉಪವಿಭಾಗದ ಉಪಕೃಷಿ ನಿರ್ದೇಶಕ ಡಾ. ಭಾನುಪ್ರಕಾಶ್ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಶಿರಸ್ತೇದಾರ್ ಪವನ್ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಫಣೀಂದ್ರ, ತಾಂತ್ರಿಕ ಅಧಿಕಾರಿ ಎಂ. ಪುಟ್ಟಭೈಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.