ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಸಮೀಪದ ದೋನಹಳ್ಳಿ ಗ್ರಾಮದ ಬೆಣಗಿನಹಳ್ಳ ಕಿರುಸೇತುವೆಯ ಒಂದು ಭಾಗ ಕುಸಿದು ಎರಡು ತಿಂಗಳು ಕಳೆದರೂ ಇನ್ನೂ ದುರಸ್ತಿಗೊಳಿಸಿಲ್ಲ. ಇದರಿಂದ ಈ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗಿದೆ.
ಆಗಸ್ಟ್ ಮೊದಲ ವಾರ ಸುರಿದ ಭಾರಿ ಮಳೆಯಿಂದಾಗಿ ಅವರೇಕಾಡು– ಮಗಜಹಳ್ಳಿ ನಡುವಿನ ಮುಖ್ಯರಸ್ತೆಗೆ ಅಡ್ಡಲಾಗಿರುವ ಬೆಣಗಿನಹಳ್ಳ ಕಿರು ಸೇತುವೆಯ ಒಂದು ಭಾಗದ ಮುರಿದು ಬಿದ್ದಿದೆ. ಇದರಿಂದಾಗಿ ದೋನಹಳ್ಳಿ, ಬಾಚನಹಳ್ಳಿ ಎಸ್ಟೇಟ್ ಹಾಗೂ ಅವರೇಕಾಡು ಗ್ರಾಮಸ್ಥರಿಗೆ ಮಗಜಹಳ್ಳಿ, ದೇವಾಲದ ಕೆರೆಯ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆಗೆ ಹೋಗಬೇಕಾದರೆ ದೇವಾಲದಕೆರೆ ಗ್ರಾಮಕ್ಕೆ ಬರಬೇಕು.
ಅಲ್ಲದೆ, ಹೊಳೆಯಿಂದ ಆಚೆ ಬದಿಯಲ್ಲಿ ದೋನಹಳ್ಳಿ ಗ್ರಾಮದ ತೇಜಪಾಲ್, ಗಿರೀಶ್, ಯೋಗೇಶ್, ರಾಮಚಂದ್ರ, ಅಪ್ಪಣ್ಣ ಸೇರಿದಂತೆ ಇನ್ನೂ ಹಲವು ರೈತರ ತೋಟ ಹಾಗೂ ಗದ್ದೆಗಳು ಇವೆ. ಸೇತುವೆ ಮುರಿದು ಬಿದ್ದಿರುವುದರಿಂದ ಅತ್ತ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಾಚನಹಳ್ಳಿ, ಅವರೇಕಾಡು, ಹಾನುಬಾಳು ಮಾರ್ಗವಾಗಿ ಸುಮಾರು 15 ಕಿ.ಮೀ ಸುತ್ತಿಕೊಂಡು ಹೋಗಬೇಕಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಹಳ್ಳದಲ್ಲಿ ಪುನಃ ಪ್ರವಾಹ ಉಂಟಾಗಿದೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.
ಈ ಹಳ್ಳಕ್ಕೆ ಎಚ್.ಡಿ.ದೇವೇಗೌಡರು ಪ್ರಧಾನಿ ಆಗಿದ್ದ ವೇಳೆ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.
ಸೇತುವೆ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸ ಲಾಗಿದೆ. ಪ್ರಧಾನಿ ಮೋದಿ ಅವರಿಗೂ ಇ–ಮೇಲ್ ಮೂಲಕ ಮನವಿ ಸಲ್ಲಿಸ ಲಾಗಿದೆ. ಆದರೆ, ಈವರೆಗೂ ಸೇತುವೆ ದುರಸ್ತಿಪಡಿಸಿಲ್ಲ ಎಂದು ಗ್ರಾಮದ ಡಿ.ಎಂ.ಗಿರೀಶ್ ಬೇಸರ ವ್ಯಕ್ತಪಡಿಸಿದರು.
ಅನುದಾನ ಕೋರಿ ಮನವಿ ಸಲ್ಲಿಕೆ
ದೋನಹಳ್ಳಿ ಕಿರು ಸೇತುವೆ ದುರಸ್ತಿಗಾಗಿ ಮಳೆಹಾನಿ ಪರಿಹಾರ ನಿಧಿ ಮತ್ತು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
**
ಎತ್ತಿನಹೊಳೆ ಯೋಜನೆಯಡಿ ಬಯಲು ಸೀಮೆಗೆ ನಮ್ಮ ತಾಲ್ಲೂಕಿನಿಂದಲೇ ನೀರು ಹರಿಸಲಾ ಗುತ್ತದೆ. ಹೀಗಾಗಿ, ಈ ಯೋಜನೆಯಡಿ ಸೇತುವೆ ದುರಸ್ತಿ ಮಾಡಿಸಬೇಕು.
-ತೇಜ್ಪಾಲ್, ದೋನಹಳ್ಳಿ ರೈತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.