ಅರಸೀಕೆರೆ: ತಾಲ್ಲೂಕಿನ ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನದಲ್ಲಿ ಶನಿವಾರ ರಾತ್ರಿ ಕಡೆ ಕಾರ್ತೀಕ ಅಂಗವಾಗಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ‘ದೇವರು ಮತ್ತು ಸುಜ್ಞಾನದೆಡೆಗೆ ಮುಕ್ತಿ ಮಾರ್ಗ ತೋರಿಸುವುದೇ ಗುರು ಪರಂಪರೆ. ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂಬ ನಂಬಿಕೆ ಸರ್ವರಲ್ಲೂ ಮೈಗೂಡಬೇಕು’ ಎಂದು ಹೇಳಿದರು.
ಗದುಗಿನ ಅಸುಂಡಿ ಅಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮ ತಾಯಿ ಮಾತನಾಡಿ, ‘ಸರ್ವ ಧರ್ಮಗಳೂ ದೀಪಕ್ಕೆ ವಿಶೇಷ ಮಹತ್ವ ನೀಡಿವೆ. ದೀಪವನ್ನು ಮಾನವರೆಲ್ಲರೂ ದೇವರೆಂದು ಆರಾಧಿಸುತ್ತೇವೆ. ಮನುಷ್ಯನನ್ನು ಅಜ್ಞಾನ ಎಂಬ ಕತ್ತಲೆಯಿಂದ ಹೊರತರುವುದೇ ದೀಪ. ಒಂದು ಕ್ಷಣದ ಬೆಳಕು ಮಾನವ ಜನ್ಮದ ಕೋಟಿ ವರ್ಷಗಳ ಕತ್ತಲೆಯನ್ನು ಕಳೆಯುತ್ತದೆ. ಮನೆ ಮತ್ತು ಮನ ಎರಡನ್ನೂ ಬೆಳಗುವುದೇ ದೀಪ. ದೀಪ ಮತ್ತು ದೀಪಾವಳಿ ಶಾಂತಿಯ ಸಂಕೇತ’ ಎಂದರು.
ಹಾಸನ ಜಿಲ್ಲೆಯ ಸಕಲೇಶಪುರದ ಆನೆಮಹಲ್ನಮೌಲ್ವಿಗಳಾದ ಇಬ್ರಾಹಿಂ ಮುಸಲಿಯಾರ್ ರವರು ಲಕ್ಷ ದೀಪೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮ ಪ್ರವಚನ ನೀಡಿದರು .
ಮಠದ ಆದಿ ಗುರು ಶಿವಲಿಂಗ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ ಹಾಗೂ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಬೆಳಗಾವಿ ಜಿಲ್ಲೆಯ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಾಸೂರು ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಕೀಲುಕುದುರೆ, ಭಜನೆ, ಭರತನಾಟ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನಸೆಳೆದವು.
ಕಡೂರು ತಾಲ್ಲೂಕಿನ ಮೂರು ಕಳಸ ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಮಾಡಾಳು ವಿರಕ್ತಮಠದ ರುದ್ರಮುನಿ ಸ್ವಾಮೀಜಿ, ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗಿ ಸ್ವಾಮೀಜಿ, ಸೊರಬ ತಾಲ್ಲೂಕಿನ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಸಖರಾಯಪಟ್ಟಣ ಹುಲಿಕೆರೆಯ ವಿರೂಪಾಕ್ಷ ಸ್ವಾಮೀಜಿ, ಗದಗ ಜಿಲ್ಲೆ ಚಿಟೆಗೇರಿ ನಗರಸಭೆಯ ಮಾಜಿ ಅಧ್ಯಕ್ಷ ಫೀರ್ ಸಾಬ್ ಕೌತಾಳ, ಸಿಪಿಐ ಚಂದ್ರಶೇಖರಯ್ಯ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.