ADVERTISEMENT

ಪ‍್ರಾಚಾರ್ಯೆ ವಿರುದ್ಧ ಕ್ರಮಕ್ಕೆ ಆಗ್ರಹ

ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 13:35 IST
Last Updated 15 ಏಪ್ರಿಲ್ 2021, 13:35 IST
ಹಾಸನದ ಸರ್ಕಾರಿ ನರ್ಸಿಂಗ್‌ ಕಾಲೇಜಿನ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು
ಹಾಸನದ ಸರ್ಕಾರಿ ನರ್ಸಿಂಗ್‌ ಕಾಲೇಜಿನ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು   

ಹಾಸನ: ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಶೋಭಾ ದೇವಮಾನೆ ಅವರು ವೈಯಕ್ತಿಕ ದ್ವೇಷದಿಂದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಗುರುವಾರದಿಂದ ಎಬಿವಿಪಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.

ಅಂತಿಮ ವರ್ಷದ ನರ್ಸಿಂಗ್‌ ವಿದ್ಯಾರ್ಥಿ ಚನ್ನಯ್ಯ ಹಿರೇಮಠ ಅವರ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ ಕಳುಹಿಸುವಾಗ ಸರಿ ಉತ್ತರಗಳನ್ನು ಹೊಡೆದು ಹಾಕಿದ್ದಾರೆ. ಚನ್ನಯ್ಯ ಹಿಂದಿನ ಎರಡು ವರ್ಷ ರ‍್ಯಾಂಕ್‌ ಪಡೆದಿದ್ದು, ಈಗ ಅನುತ್ತೀರ್ಣನಾಗಿರುವುದು ಎಲ್ಲರನ್ನೂ ಚಿಂತೆಗೀಡು ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿಕೊಂಡು ನೋಡಿದಾಗ ಸರಿ ಉತ್ತರಗಳನ್ನು ಹೊಡೆದು ಹಾಕಿರುವುದು ತಿಳಿದಿದೆ. ಈ ಸಂಬಂಧಪ್ರಾಂಶುಪಾಲರ ವಿರುದ್ಧ ಬಡಾವಣೆ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದರೂ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ವೈಯಕ್ತಿಕ ದ್ವೇಷದಿಂದ ಪ್ರಾಚಾರ್ಯೆ ವಿದ್ಯಾರ್ಥಿಯ ಜೀವನ ಹಾಳು ಮಾಡಿದ್ದಾರೆ. ಸರ್ಕಾರಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಚನ್ನಯ್ಯನ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡಿ ಶೀಘ್ರ ಫಲಿತಾಂಶ ಘೋಷಿಸಬೇಕು. ತಪ್ಪಿತಸ್ಥರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಬೊಮ್ಮಣ್ಣ, ಐಶ್ವರ್ಯ, ಮಂಜುನಾಥ್, ಚನ್ನಯ್ಯ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.