
ಚನ್ನರಾಯಪಟ್ಟಣ: ‘ದೇಸಿ ಜಾನುವಾರುಗಳ ಅಭಿವೃದ್ದಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ರಾಸುಗಳ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಸುಗಳ ಸಂಖ್ಯೆ ಕಡಿಮೆಯಾದ ಕಾರಣ ನೇಗಿಲಿನಿಂದ ಉಳುಮೆ ಮಾಡುವುದು ಕಡಿಮೆಯಾಗುತ್ತಿದೆ. ಅದರ ಬದಲಿಗೆ ಟ್ರಾಕ್ಟರ್ ಅವಲಂಭಿಸುವಂತಾಗಿದೆ. ಆಧುನಿಕ ಕೃಷಿಪದ್ಧತಿಯಿಂದ ದೇಸಿ ರಾಸುಗಳನ್ನು ಸಾಕುವರ ಸಂಖ್ಯೆಯ ಕಡಿಮೆಯಾಗುತ್ತಿದೆ ಎಂದು ಹೇಳಿದರು.
‘ಹೈನುಗಾರಿಕೆಯ ಉದ್ದೇಶದಿಂದ ದನಗಳನ್ನು ಸಾಕಲಾಗುತ್ತಿದೆ. ದೇಸಿ ಹಸುಗಳ ಅಭಿವೃದ್ಧಿಗೆ ಕ್ರಮವಹಿಸುವ ಹೊಣೆ ಎಲ್ಲರ ಮೇಲಿದೆ ಎಂದ ಅವರು, ಕೋವಿಡ್ ಕಾರಣ ಸ್ಥಗಿತಗೊಳಿಸಲಾಗಿದ್ದ ರಾಸುಗಳ ಜಾತ್ರೆಯನ್ನು ಕಳೆದ ವರ್ಷದಿಂದ ಆರಂಭಿಸಲಾಗಿದೆ. ಮುಂದಿನ ವರ್ಷದಿಂದ ರಾಸುಗಳ ಜಾತ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಜಾತ್ರೆ ಆಯೋಜಿಸಲಾಗುವುದು’ ಎಂದು ಹೇಳಿದರು.
‘ಎಪಿಎಂಸಿ ಆವರಣದಲ್ಲಿ ವಿದ್ಯುತ್ ದೀಪದ ಸೌಲಭ್ಯ, ರಾಸುಗಳಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗಿದೆ. ಆವರಣದಲ್ಲಿ ಶುಚಿತ್ವ ಕಾಪಾಡಲಾಗುವುದು. ಫೆ.6ರಿಂದ ಇದೇ ತಿಂಗಳು 13ವರೆಗೆ ಜಾತ್ರೆ ನಡೆಯಲಿದೆ. ಬೇರೆ ಜಿಲ್ಲೆಗಳಿಂದ ರಾಸುಗಳನ್ನು ರೈತರು ಕರೆತಂದಿದ್ದಾರೆ. ಉತ್ತಮ ರಾಸುಗಳಿಗೆ ಎಪಿಎಂಸಿ ಮತ್ತು ಪುರಸಭೆಯಿಂದ ಫೆ.13ರಂದು ಬಹುಮಾನ ನೀಡಲಾಗುವುದು’ ಎಂದು ತಿಳಿಸಿದರು.
ರಾಸುಗಳಿಗೆ ಪೂಜೆಮಾಡಿ, ಮಂಗಳವಾದ್ಯದ ನಾದದೊದಿಗೆ ಎಪಿಎಂಸಿ ಆವರಣಕ್ಕೆ ಮೆರವಣಿಗೆ ಮೂಲಕ ತರಲಾಯಿತು. ಪುರಸಭೆಯ ಮುಖ್ಯಾಧಿಕಾರಿ ಆರ್. ಯತೀಶ್ಕುಮಾರ್, ಪುರಸಭೆಯ ಮಾಜಿ ಅಧ್ಯಕ್ಷ ಸಿ.ಎನ್ .ಮೋಹನ್, ಎಪಿಂಎಸಿ ಕಾರ್ಯದರ್ಶಿ ಸೋಮಶೇಖರ್, ಟಿಎಪಿಸಿಎಂಎಸ್ ಅದ್ಯಕ್ಷ ಎಚ್.ಆರ್. ವೆಂಕಟೇಶ್, ನಿರ್ದೇಶಕ ಎಂ.ಆರ್. ಅನಿಲ್ಕುಮಾರ್, ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್. ಯುವರಾಜ್, ರೈತಸಂಘದ ಅದ್ಯಕ್ಷ ಸಿ.ಜಿ. ರವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.