ADVERTISEMENT

ರೋಗಿಗಳ ಆರೈಕೆಗೆ ‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನ

ಕೃಷಿ ಮಹಾವಿದ್ಯಾಲಯದಲ್ಲಿ ಪೂಜಾ ರಘುನಂದನ್‌ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 3:58 IST
Last Updated 30 ನವೆಂಬರ್ 2022, 3:58 IST
ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ.
ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ನಾಟಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ.   

ಹಾಸನ: ಇಲ್ಲಿನ ರಂಗಹೃದಯ ಕಲಾತಂಡ ಪ್ರಸ್ತುತಿಪಡಿಸುವ ಪೂಜಾ ರಘುನಂದನ್ ಅಭಿನಯ ಹಾಗೂ ಕೃಷ್ಣಮೂರ್ತಿ ಕವತ್ತಾರ್ ಅವರ ನಿರ್ದೇಶನದ ‘ತಾಯಿಯಾಗುವುದೆಂದರೆ’ ಏಕವ್ಯಕ್ತಿ ರಂಗ ಪ್ರದರ್ಶನದ 10ನೇ ರಂಗ ಪ್ರಯೋಗವು ತಾಲ್ಲೂಕಿನ ಶಾಂತಿಗ್ರಾಮ ಸಮೀಪದ ಕೃಷಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆಯಿತು.

ಕ್ಯಾನ್ಸರ್ ಹಾಗೂ ಇನ್ನಿತರ ಗುಣಪಡಿಸಲಾಗದ ರೋಗಿಗಳ ಆರೈಕೆ ಸಹಾಯಾರ್ಥ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ಹಿಮ್ಸ್ ಹಾಗೂ ರೋಟರಿ ಕ್ಲಬ್ ಹಾಸನ್ ಹೊಯ್ಸಳ ಸಹಯೋಗದೊಂದಿಗೆ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ತಾಯ್ತನದ ತುಮುಲುಗಳು ಮತ್ತು ಭಾವನೆಗಳನ್ನು ತಮಗೆ ಆದ ಸ್ವಂತ ಅನುಭವವನ್ನುನಾಟಕದ ಮೂಲಕ ಪೂಜಾ ರಘುನಂದನ್ ಪ್ರದರ್ಶಿಸಿದರು.

ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರು ತಪ್ಪದೇ ವೀಕ್ಷಣೆ ಮಾಡಲೇಬೇಕಾದ ನಾಟಕ ಇದಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಸ್.ಎನ್ ವಾಸುದೇವನ್ ಹೇಳಿದರು.

ADVERTISEMENT

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಹಾಸನ ಶಾಖೆಯ ಸ್ಥಳೀಯ ಸಂಚಾಲಕ, ಉಪಾಧ್ಯಕ್ಷ ಡಾ. ಸುಧೀರ್ ಬಿ. ಮಾತನಾಡಿ, ಹಿಮ್ಸ್ ಮತ್ತು ಎಸ್‌ವಿವೈಎಂಜಂಟಿಯಾಗಿ ಅನುಷ್ಠಾನ ಮಾಡುತ್ತಿರುವ ಮನೆ ಆಧಾರಿತ ಉಪಶಮನ ಆರೈಕೆ ಕಾರ್ಯಕ್ರಮದಲ್ಲಿ ಗುಣಪಡಿಸಲಾಗದ ಕಾಯಿಲೆಗಳಾದ ಕ್ಯಾನ್ಸರ್, ಕಿಡ್ನಿ ತೊಂದರೆ, ಸ್ಟ್ರೋಕ್ ಇತ್ಯಾದಿಗಳಿಂದ ಬಳಲುತ್ತಿರುವ ಬಡ ರೋಗಿಗಳ ಶುಶ್ರೂಷೆಗೆ ಧನ ಸಂಗ್ರಹಿಸಲು ಪೂಜಾ ರಘುನಂದನ್ ಹಾಗೂ ತಂಡದವರು ಈ ರಂಗ ಪ್ರಯೋಗದ 10 ನೇ ಅವೃತ್ತಿಯನ್ನು ಸಮರ್ಪಿಸುತ್ತಿರುವುದನ್ನು ಶ್ಲಾಘನೀಯ ಎಂದು ಹೇಳಿದರು.

ಕೃಷಿ ಕಾಲೇಜು ವಿದ್ಯಾರ್ಥಿ ಕಲ್ಯಾಣನಿಧಿ ನಿರ್ದೇಶಕ ಡಾ. ಶಶಿಕಿರಣ್, ಅರಣ್ಯಶಾಸ್ತ್ರ ಮತ್ತು ಪರಿಸರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ವರ್ಗ, ಬೋಧಕೇತರ ಸಿಬ್ಬಂದಿ , ಹಿಮ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಿಬ್ಬಂದಿ, ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ ಅಧ್ಯಕ್ಷ ರಘುನಂದನ್, ಮೋಹನ್ ಡಿ.,ರೋಟರಿ ಹಾಸನ ಹೊಯ್ಸಳ ಕ್ಲಬ್ ಸದಸ್ಯರು ಸೇರಿದಂತೆ 700 ಜನರು ನಾಟಕ ವೀಕ್ಷಿಸಿದರು. ಸ್ವಾಮಿವಿವೇಕಾನಂದ ಯೂತ್ ಮೂವ್‍ಮೆಂಟ್ ಜಿಲ್ಲಾ ಸಂಯೋಜಕ ಯೋಗನಾಥ್ ಎಂ.ಎಚ್. ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.