ADVERTISEMENT

ಗೇರುಮರ ಗ್ರಾಮದಲ್ಲಿ ರೈತರ ಪ್ರತಿಭಟನೆ

ಎತ್ತಿನಹೊಳೆ ಯೋಜನೆ ಸಂತ್ರಸ್ತರಿಗೆ ಪರಿಹಾರ ನೀಡಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 13:53 IST
Last Updated 16 ನವೆಂಬರ್ 2019, 13:53 IST
ಜಾವಗಲ್ ಸಮೀಪದ ಗೇರುಮರ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ ರೈತರು ತಹಶೀಲ್ದಾರ್ ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು
ಜಾವಗಲ್ ಸಮೀಪದ ಗೇರುಮರ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ ರೈತರು ತಹಶೀಲ್ದಾರ್ ಸಂತೋಷ್ ಅವರಿಗೆ ಮನವಿ ಸಲ್ಲಿಸಿದರು   

ಜಾವಗಲ್: ಎತ್ತಿನಹೊಳೆ ಯೋಜನೆಯ ಸಂತ್ರಸ್ತರಿಗೆ ಪರಿಹಾರ ಕುರಿತು ರೈತರು ಸಮೀಪದ ಗೇರುಮರ ಗ್ರಾಮದಲ್ಲಿ ಶನಿವಾರ ದಿಢೀರ್ ಪ್ರತಿಭಟನೆ ಆರಂಭಿಸಿದರು.

ಎತ್ತಿನಹೊಳೆ ಯೋಜನೆಯಿಂದ ತಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ರೈತರು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ, ಕಾಮಗಾರಿ ನಡೆಯುವ ಜಾಗದಲ್ಲಿ ಮೌನ ಪ್ರತಿಭಟನೆ ಆರಂಭಿಸಿದರು. ಕಲ್ಯಾಡಿ, ನಾಯ್ಕನಕೆರೆ, ಕರಗುಂದ ಭಾಗದ ರೈತರು ಮತ್ತು ರೈತ ಮುಖಂಡರು ಸೇರಿದಂತೆ 200 ಕ್ಕಿಂತ ಹೆಚ್ಚು ಜನರು ಇದ್ದರು.

ಪ್ರತಿಭಟನೆಯ ಸ್ಥಳಕ್ಕೆ ತಹಶೀಲ್ದಾರ್ ಎಂ.ಕೆ. ಸಂತೋಷಕುಮಾರ್‌ ಬಂದಾಗ ರೈತ ಮುಖಂಡರಾದ ರಾಜು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಮಾತನಾಡಿ, ‘ಈ ಯೋಜನೆ ಬಂದಿರುವುದು ಸಂತೋಷದ ವಿಷಯ. ಆದರೆ, ಭೂಮಿ ಕಳೆದುಕೊಳ್ಳುತ್ತಿರುವ ನಮ್ಮ ಗ್ರಾಮದ ರೈತರಿಗೆ ನೀರಿಲ್ಲ. ದಯಮಾಡಿ ಈ ಯೋಜನೆಯಿಂದ ಈ ಭಾಗದ ಎಲ್ಲಾ ಕೆರೆಗಳಿಗೂ ಕುಡಿಯುವ ಉದ್ದೇಶದಿಂದ ನೀರು ನೀಡಬೇಕು. ಹಾಗೂ ಫಾರಂ 53 ರಲ್ಲಿ ಅರ್ಜಿ ಹಾಕಿದ ರೈತರ ಭೂಮಿಗೂ ಸಹ ಯಾವುದೇ ತಾರತಮ್ಯ ನೀಡದೆ ಭೂ ಪರಿಹಾರ ನೀಡಬೇಕು‘ ಎಂದು ಮನವಿ ಮಾಡಿದರು.

ADVERTISEMENT

‘ಈ ಭಾಗದಲ್ಲಿ ಸಿಗುವಂತ ಜಲ್ಲಿಕಲ್ಲು ಎಂ ಸ್ಯಾಂಡ್ ಬೇರೆ ಜಿಲ್ಲೆಗಳಿಗೆ ಗುತ್ತಿಗೆದಾರರು ಕಳುಹಿಸುತ್ತಿದ್ದು ತಕ್ಷಣ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು. ಹೆಚ್ಚು ಭಾರ ತುಂಬಿದ ಲಾರಿಗಳು ರಸ್ತೆಯಲ್ಲಿ ಓಡಾಡಿದರೂ ಪೊಲೀಸ್ ಇಲಾಖೆ ಜಾಣ ಮೌನ ತೋರಿಸುತ್ತಿದೆ. ನಮ್ಮ ಭಾಗದ ರಸ್ತೆಗಳು ಹಾಳಾಗಿದ್ದು ಕೂಡಲೇ ಸರಿಪಡಿಸಬೇಕು, ಸಕಲೇಶಪುರದಲ್ಲಿ ರೈತರಿಗೆ ನೀಡಿದಂತೆ ನಮಗೂ ಪರಿಹಾರ ನೀಡಬೇಕು’ ಎಂದು ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಬೋರೆಹಳ್ಳಿ ವೇಂಟೇಶ್, ಧನಂಜಯ್ ಕರಗುಂದ, ರಂಗನಾಥ್ ಹಾಗೂ ಸುತ್ತಮುತ್ತಲಿನ ಅನೇಕ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.