ADVERTISEMENT

ಅರಕಲಗೂಡು: 5 ತಿಂಗಳಲ್ಲಿ 79 ಬೆಂಕಿ ಪ್ರಕರಣ

₹ 1 ಕೋಟಿ ಮೊತ್ತದ ಆಸ್ತಿಯ ರಕ್ಷಣೆ; ₹ 44.61 ಲಕ್ಷ ಮೌಲ್ಯದ ಆಸ್ತಿಗೆ ಹಾನಿ

ಜಿ.ಚಂದ್ರಶೇಖರ್‌
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
06 ಎಆರ್ ಕೆ4: ಅರಕಲಗೂಡಿನಲ್ಲಿರುವ ಅಗ್ನಿಶಾಮಕ ಠಾಣೆ ಕಚೇರಿ
06 ಎಆರ್ ಕೆ4: ಅರಕಲಗೂಡಿನಲ್ಲಿರುವ ಅಗ್ನಿಶಾಮಕ ಠಾಣೆ ಕಚೇರಿ   

ಅರಕಲಗೂಡು: ಇಲ್ಲಿನ ಅಗ್ನಿಶಾಮಕ ಠಾಣೆ ವ್ಯಾಪ್ತಿಯಲ್ಲಿ ಕಳೆದ 5 ತಿಂಗಳ ಅವಧಿಯಲ್ಲಿ 79 ಬೆಂಕಿ ಅವಘಡ ಪ್ರಕರಣಗಳು ನಡೆದಿದ್ದು, ₹ 44.61 ಲಕ್ಷ ಹಾನಿ ಸಂಭವಿಸಿದೆ.

ಬೆಂಕಿ ಪ್ರಕರಣಗಳಲ್ಲಿ ಹುಲ್ಲಿನ ಬಣವೆಗಳು, ಅರಣ್ಯ ಪ್ರದೇಶ, ಮನೆಗಳು, ತೋಟ, ಹುಲ್ಲು ಸಾಗಣೆ ವಾಹನಗಳಿಗೆ ಹಾನಿಯಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿಯ ಸತತ ಪ್ರಯತ್ನದ ಫಲವಾಗಿ ₹ 99.45 ಲಕ್ಷ ಬೆಲೆಯ ಆಸ್ತಿ ರಕ್ಷಣೆ ಮಾಡಲಾಗಿದೆ ಎಂದು ಠಾಣಾಧಿಕಾರಿ ಬಿ.ಎಸ್.ದಿನೇಶ್ ಆನಂದ್ ತಿಳಿಸಿದರು.

ಈ ವರ್ಷದ ಜನವರಿಯಲ್ಲಿ ನಡೆದ ಪ್ರಕರಣಗಳಲ್ಲಿ ₹ 14.54 ಲಕ್ಷ ಹಾನಿಯಾಗಿದ್ದರೆ, ₹ 42.66 ಲಕ್ಷ ಬೆಲೆಯ ಆಸ್ತಿ ಉಳಿಸಲಾಗಿದೆ. ಫೆಬ್ರುವರಿಯಲ್ಲಿ ಹಾನಿ ₹ 7.53 ಲಕ್ಷ, ರಕ್ಷಣೆ ₹ 24.38 ಲಕ್ಷ, ಮಾರ್ಚ್‌ನಲ್ಲಿ ₹ 13.80 ಲಕ್ಷ ಹಾನಿ, ₹ 18.65 ಲಕ್ಷ ರಕ್ಷಣೆ, ಏಪ್ರಿಲ್‌ನಲ್ಲಿ ₹ 6.24 ಲಕ್ಷ ಹಾನಿ, ₹ 13.06 ಲಕ್ಷ ರಕ್ಷಣೆ, ಮೇ ತಿಂಗಳಿನಲ್ಲಿ ₹ 2.50 ಲಕ್ಷ ಹಾನಿ ಸಂಭವಿಸಿದ್ದರೆ, ₹ 70,000 ಮೌಲ್ಯದ ಆಸ್ತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಕಳೆದ ವರ್ಷ ಇದೇ ಅವಧಿಯಲ್ಲಿ 74 ಬೆಂಕಿ ಪ್ರಕರಣ ನಡೆದಿದ್ದು ₹ 1.50 ಕೋಟಿ ಹಾನಿ ಸಂಭವಿಸಿತ್ತು. ಸಾರ್ವಜನಿಕರಲ್ಲಿ ಬೆಂಕಿ ಕುರಿತ ಅಜಾಗರೂಕತೆ, ನಿರ್ಲಕ್ಷ್ಯವೇ ಪ್ರಕರಣಗಳು ಹೆಚ್ಚಲು ಕಾರಣವಾಗುತ್ತಿದೆ. ಈ ಕುರಿತು ಅವಕಾಶ ದೊರೆತಲ್ಲೆಲ್ಲಾ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಡೆಸುತ್ತಿರುವುದಾಗಿ ಹೇಳಿದರು.

ಬೆಂಕಿ ಅವಘಡಗಳು ಸಂಭವಿಸಿದಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಸಂಗಡ ಅಗ್ನಿ ಶಾಮಕದಳದ ಕಚೇರಿಗೆ ಮಾಹಿತಿ ನೀಡುವವರು ಪ್ರಕರಣ ಸ್ಥಳದ ಖಚಿತ ಮಾಹಿತಿ ಮತ್ತು ಅಲ್ಲಿಗೆ ತಲುಪಲು ಇರುವ ಸಮೀಪದ ದಾರಿಯ ಬಗ್ಗೆ ಮಾಹಿತಿ ನೀಡಿದರೆ, ಶೀಘ್ರವಾಗಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಲು ಕ್ರಮ ಕೈಗೊಳ್ಳುವುದರಿಂದ ಹಾನಿ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯದಲ್ಲೂ ಅಗ್ನಿಶಾಮಕ ದಳದ ನೆರವು ಪಡೆಯಲಾಗುತ್ತಿದೆ. ಇಲ್ಲಿ ಸಂಭವಿಸುವ ಅವಘಡಗಳ ನಿರ್ವಹಣೆಗೆ ಅಗತ್ಯವಾದ ಪರಿಕರಗಳ ಕೊರತೆ ಇದೆ. ಪರಿಕರಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಭರವಸೆ ನೀಡಿದ್ದಾರೆ ಎಂದು ಬಿ.ಎಸ್.ದಿನೇಶ್ ಆನಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.