ಹಾಸನ: ‘ಮಹಾತ್ಮ ಗಾಂಧಿ ಅವರ ತತ್ವ ಅನುಸರಿಸದಿದ್ದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಂಗಳವಾರ ಮಹಾತ್ಮಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಾಂಧೀಜಿ ದೇಶ ಕಂಡ ಅತಿದೊಡ್ಡ ಸರ್ವಧರ್ಮ ಆರಾಧಕ. ಅವರ ಜೀವನವೇ ಆದರ್ಶಪ್ರಾಯ. ಅವರು ಕಂಡ ರಾಮರಾಜ್ಯದ ಕನಸು ನನಸಾಗಿಸಲು ಮೊದಲು ಮನುಷ್ಯ ತನ್ನೊಳಗಿನ ಶತ್ರುವನ್ನು ಜಯಿಸಬೇಕು. ಆಗ ಉತ್ತಮ ನಾಗರಿಕ ಸಮಾಜ ನಿರ್ಮಾಣ ಸಾಧ್ಯ’ ಎಂದು ತಿಳಿಸಿದರು.
‘ಬಾಲ್ಯದಲ್ಲಿ ಮಾಡುವ ತಪ್ಪುಗಳಿಗೆ ಕ್ಷಮೆ ಇರುತ್ತದೆ. ಪ್ರೌಢಾವಸ್ಥೆ ತಲುಪಿದ ಮೇಲೆ ಮಾಡುವ ತಪ್ಪುಗಳು ಸಮಾಜದ ದೃಷ್ಟಿಯಲ್ಲಿ ಕೆಡುಕಾಗಿ ಕಾಣುತ್ತದೆ ಎಂಬುದನ್ನು ಅರಿತು ನಡೆಯಿರಿ’ ಎಂದು ಸಲಹೆ ನೀಡಿದರು.
ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್ ಅಂಥ ಮಹನೀಯರು ಸಮಾಜಕ್ಕೆ ನೀಡಿದ ಮೌಲ್ಯಗಳ ರಕ್ಷಣೆಯ ಗುರುತರ ಹೊಣೆಗಾರಿಕೆಎಲ್ಲರದೂ ಆಗಿದೆ’ ಎಂದು ತಿಳಿಸಿದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ದಸರಿಘಟ್ಟ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ, ಸಾಮಾಜ ಸೇವಕ ಡಾ.ಗುರುರಾಜ್ ಹೆಬ್ಬಾರ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಾ ಮಾಲಾ, ಜೆಡಿಎಸ್ ಮುಖಂಡ ಎಚ್.ಎಸ್.ಅನಿಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ಗೌಡ. ಇಸ್ಲಾಂ ಧರ್ಮ ಗುರು ಮೌಲಾನಾ ಮುಫ್ತಿ ಅಮಿನುಲ್ಲಾ ಖಾಸ್ಮಿ, ಕ್ರೈಸ್ತ ಧರ್ಮ ಗುರು ಸುರೇಶ್ ಜೋಸ್ವ ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ಇದ್ದರು.
ಗಮನ ಸೆಳೆದ ನೃತ್ಯರೂಪಕ
ಆದಿಚುಂಚನಗಿರಿ ಮಹಾ ಸಂಸ್ಥಾನದ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿ ಕುರಿತು ಪ್ರಸ್ತುತ ಪಡಿಸಿದ ನೃತ್ಯರೂಪಕ ಗಮನ ಸೆಳೆಯಿತು. ರೋಹನ್ ಅಯ್ಯರ್ ತಂಡ ಗೀತಗಾಯನ ನಡೆಸಿಕೊಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.