ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಮೆಟಾ ಎಐ
ಹಾಸನ: ತಾಲ್ಲೂಕಿನ ಧೂಮಗೆರೆ ಗ್ರಾಮದ ನವ್ಯಶ್ರೀ ಮಿನರಲ್ಸ್ಗೆ ಸೇರಿದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಗುರುವಾರ ಮಧ್ಯಾಹ್ನ ಬಂಡೆ, ಮಣ್ಣು ಕುಸಿದು ಮಣಿ (40) ಎಂಬವರು ಮೃತಪಟ್ಟಿದ್ದಾರೆ.
ಮೃತದೇಹವನ್ನು ತಮಿಳುನಾಡಿನ ಅವರ ಗ್ರಾಮಕ್ಕೆ ಗುಟ್ಟಾಗಿ ರವಾನಿಸಿ ಅಂತ್ಯಕ್ರಿಯೆ ನಡೆಸುವ ಯತ್ನಕ್ಕೆ ಶಾಂತಿಗ್ರಾಮ ಠಾಣೆಯ ಪೊಲೀಸರು ತಡೆ ಒಡ್ಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಕಾರ್ಮಿಕರಾದ ಸೆಲ್ವನ್, ಏಳುಮಲೈ, ಸಿದ್ದರಾಜು, ಹಾಗೂ ಮಧುಲೈ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮಣಿ ಮೃತಪಟ್ಟಿದ್ದರು. ನಂತರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ತಮಿಳುನಾಡಿಗೆ ಕಳಿಸಲಾಗಿದೆ ಎಂಬ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ತೆರಳಿ ಅಂತ್ಯಕ್ರಿಯೆ ಯನ್ನು ತಡೆದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಕ್ವಾರಿಯ ಮಾಲೀಕರಾದ ದೇವರಾಜ್, ಅವರ ಪುತ್ರ ಅರ್ಜುನ್, ಶ್ರೀಧರ ಬಾಬು, ಕೃಷ್ಣಮೂರ್ತಿ ಮತ್ತು ಕ್ವಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ದೇವರಾಜ್ ಹಾಗೂ ಪ್ರಕಾಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿ ಸಿಕ್ಕಿದ್ದು ರಾತ್ರಿ: ಕ್ವಾರಿಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ದುರ್ಘಟನೆ ನಡೆದಿದ್ದರೂ, ಪೊಲೀಸರಿಗೆ ರಾತ್ರಿ 10.30ಕ್ಕೆ ಮಾಹಿತಿ ದೊರೆಯಿತು. ಕೂಡಲೇ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಎಸ್ಪಿ ಮೊಹಮ್ಮದ್ ಸುಜೀತಾ, ಉಪ ವಿಭಾಗಾಧಿಕಾರಿ ಮಾರುತಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶ್ರೀನಿವಾಸ್ ಅವರೊಂದಿಗೆ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲಿಸಿದರು.
ಸ್ಫೋಟದಿಂದಲೇ ಘಟನೆ ನಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ. ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.–ಡಾ. ಎಂ.ಬಿ. ಬೋರಲಿಂಗಯ್ಯ, ದಕ್ಷಿಣ ವಲಯ ಐಜಿಪಿ
ನವ್ಯಶ್ರೀ ಮಿನರಲ್ಸ್ಗೆ ಸೇರಿದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಬಂಡೆ, ಮಣ್ಣು ಕುಸಿದಿದ್ದು
ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.