ADVERTISEMENT

ಹಳೇಬೀಡು: ಅಧ್ಯಯನದ ಮಹತ್ವ ತಿಳಿಸಿದ ಪುಸ್ತಕ ಪ್ರದರ್ಶನ

ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆದಿದ್ದ ಜ್ಞಾನ ಭಂಡಾರ

ಎಚ್.ಎಸ್.ಅನಿಲ್ ಕುಮಾರ್
Published 19 ನವೆಂಬರ್ 2025, 2:49 IST
Last Updated 19 ನವೆಂಬರ್ 2025, 2:49 IST
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ಪುಸ್ತಕ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ವೀಕ್ಷಿಸಿದರು. 
ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿರುವ ಪುಸ್ತಕ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ವೀಕ್ಷಿಸಿದರು.    

ಹಳೇಬೀಡು: ಗ್ರಂಥಗಳ ಅಧ್ಯಯನದಿಂದ ಜ್ಞಾನಾರ್ಜನೆ ಆಗುತ್ತದೆ. ಪುಸ್ತಕ ಸಂಸ್ಕೃತಿ ಭವಿಷ್ಯದ ಪೀಳಿಗೆಗೆ ಉಳಿಯಬೇಕು ಎಂಬುದರ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಗ್ರಂಥಾಲಯ ಸಪ್ತಾಹ ಅಂಗವಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನ ವಿದ್ಯಾರ್ಥಿಗಳ ಮೆಚ್ಙುಗೆ ಪಡೆದಿದೆ.

ವಿಶಿಷ್ಟ ಗ್ರಂಥಗಳ ಭಂಡಾರವನ್ನು ವಿದ್ಯಾರ್ಥಿಗಳು ಮಾತ್ರವಲ್ಲದೇ, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಕಣ್ತುಂಬಿಕೊಂಡರು. ಪುಸ್ತಕ ಲೋಕವನ್ನು ಅರಳಿಸುವ ಉದ್ದೇಶದಿಂದ ಕಾಲೇಜಿನ ಗ್ರಂಥಾಲಯ ವಿಭಾಗ, ಪ್ರಾಂಶುಪಾಲರು ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರ ಸಹಕಾರದಿಂದ ಪುಸ್ತಕ ಪ್ರದರ್ಶನ ಆಯೋಜಿಸಿತ್ತು. ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಗ್ರಂಥ ಅಧ್ಯಯನ ಮರೆತವರಿಗೆ ಪುಸ್ತಕದ ಮಹತ್ವವನ್ನು ಪ್ರದರ್ಶನ ತಿಳಿಸಿತು.

ಓದುವ ಹವ್ಯಾಸ ಕಡಿಮೆಯಾಗಿದೆ. ಹೀಗಾಗಿ ಓದುಗರಿಗೆ ನಾವೇ ಪುಸ್ತಕವನ್ನು ತಲುಪಿಸುವಂತಾಗಿದೆ. ವಿದ್ಯಾರ್ಥಿಗಳು ಪಠ್ಯ ಅಧ್ಯಯನಕ್ಕೆ ಮಾತ್ರ ಸಿಮೀತವಾಗಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಪರಿಚಯಿಸುವ ಉದ್ದೇಶದಿಂದ ಪುಸ್ತಕ ಪ್ರದರ್ಶನ ನಡೆಸುತ್ತಿದ್ದೇವೆ. ಪುಸ್ತಕ ಪ್ರದರ್ಶನದಲ್ಲಿ ಮಕ್ಕಳ ಕಲರವ ಹೆಚ್ಚಾಗಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಆಯ್ಕೆ ಶ್ರೇಣಿ ಗ್ರಂಥಪಾಲಕ ಮನೋಜ್ ಕುಮಾರ್ ಕೆ.ಎಸ್. ತಿಳಿಸಿದರು.

ADVERTISEMENT

ಕಾಲೇಜಿನ ಗ್ರಂಥಾಲಯದಲ್ಲಿ 10 ಸಾವಿರ ಪುಸ್ತಕಗಳಿವೆ. 800 ಪ್ರಮುಖ ಪುಸ್ತಕಗಳನ್ನು ಪ್ರದಶರ್ನಕ್ಕೆ ಇಡಲಾಗಿದೆ. ಕುವೆಂಪು, ಕಾರಂತರು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಸ್.ಎಲ್. ಭೈರಪ್ಪ, ಪೂರ್ಣಚಂದ್ರ ತೇಜಸ್ವಿ ಮೊದಲಾದ ಪ್ರಸಿದ್ದರ ಪುಸ್ತಕಗಳು ಪ್ರದರ್ಶನದಲ್ಲಿವೆ ಎಂದು ಪ್ರಾಂಶುಪಾಲ ಶ್ರೀನಿವಾಸ ಬಿ.ಕೆ. ಹೇಳಿದರು.

ಅತಿಮುಖ್ಯವಾದ ಪುಸ್ತಕಗಳನ್ನು ಪ್ರದರ್ಶನ ಮಾಡಿರುವುದರಿಂದ ಅಧ್ಯಯನಕ್ಕೆ ಯಾವ ಗ್ರಂಥಗಳ ಅಗತ್ಯವಿದೆ ಎಂಬ ಮಾಹಿತಿ ದೊರಕಿತು ಎಂದು ಎಂ.ಕಾಂ ವಿದ್ಯಾರ್ಥಿನಿ ಚೈತ್ರಾ ಎಸ್.ಎಂ. ಹೇಳಿದರು.

ಶೈಕ್ಷಣಿಕ ಅವಧಿಯಲ್ಲಿ ಅಗತ್ಯವಿರುವ ಪುಸ್ತಕಗಳ ಕುರಿತು ಪ್ರಾಧ್ಯಾಪಕರು ತರಗತಿಯಲ್ಲಿ ಮಾಹಿತಿ ಕೊಡುತ್ತಾರೆ. ಪುಸ್ತಕ ಪ್ರದರ್ಶನದಿಂದ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕದ ಕುರಿತು ಮಾಹಿತಿ ದೊರಕಿತು. ಪ್ರದರ್ಶನ ಸಾಧನೆಯ ಕನಸುಗಳು ಈಡೇರಿಕೆಯತ್ತ ಗಮನಹರಿಸಿದೆ ಎಂದು ಪ್ರಥಮ ಎಂಕಾಂ ವಿದ್ಯಾರ್ಥಿ ಯತಿರಾಜ್ ಎ.ಎಸ್. ಹೇಳಿದರು.

ನಾವು ನೋಡದೇ ಇದ್ದ ಸಾಕಷ್ಟು ಪುಸ್ತಕಗಳ ಪರಿಚಯವಾಯಿತು. ಪುಸ್ತಕದ ಮಹತ್ವ ತಿಳಿದುಕೊಂಡೆವು ಎಂಬ ಮಾತು ವಿದ್ಯಾರ್ಥಿಗಳಿಂದ ಕೇಳಿ ಬಂತು
ಶ್ರೀನಿವಾಸ ಬಿ.ಕೆ. ಪ್ರಾಂಶುಪಾಲ
ಮೊಬೈಲ್‌ನಲ್ಲಿ ಅಧ್ಯಯನ ಮಾಡುವಾಗ ಜಾಹೀರಾತು ಬೇರೆ ಆ್ಯಪ್‌ ತೆರೆದುಕೊಂಡು ಮನಸ್ಸು ಬೇರೆಡೆ ಹೊರಳುತ್ತದೆ. ಪುಸ್ತಕ ಮನಸ್ಸನ್ನು ಕೇಂದ್ರೀಕರಿಸುತ್ತದೆ
ಮನೋಜ್ ಕುಮಾರ್ ಕೆ.ಎಸ್. ಆಯ್ಕೆ ಶ್ರೇಣಿ ಗ್ರಂಥಪಾಲಕ

ಪ್ರಮುಖ ಗ್ರಂಥಗಳ ಪರಿಚಯ

ನೋಬೆಲ್ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಪುಸ್ತಕಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿದೆ. 80 ಭಾಷೆಗೆ ಭಾಷಾಂತರವಾದ ಅಮೂಲ್ಯ ಪುಸ್ತಕಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಪ್ರದರ್ಶನದಲ್ಲಿರುವ ಕನ್ನಡ ವಿಶ್ವಕೋಶ ಕರ್ನಾಟಕ ಎಪಿಗ್ರಫಿ 9 ಸಂಪುಟಗಳನ್ನು ಕೈಯಲ್ಲಿ ಹಿಡಿದು ನೋಡಿ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ. ದ್ವಿತೀಯ ದರ್ಜೆ ಸಹಾಯಕರಿಂದ ಯುಪಿಎಸ್‌ಸಿ ಪರೀಕ್ಷೆವರೆಗೆ ಉಪಯುಕ್ತವಾದ ಪುಸ್ತಕಗಳು ಪ್ರದರ್ಶನದಲ್ಲಿವೆ ಎಂದು ಮನೋಜ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.