ADVERTISEMENT

ಹಾಸನ: ಮೇಳದ ಹೆಸರಲ್ಲಿ ಕ್ರಿಕೆಟ್ ಮೈದಾನಕ್ಕೆ ಹಾನಿ

ಜಿಲ್ಲಾಡಳಿತದ ಕ್ರಮಕ್ಕೆ ಕ್ರೀಡಾಪಟುಗಳು, ಕ್ರೀಡಾಸಕ್ತರಿಂದ ವ್ಯಾಪಕ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 4:58 IST
Last Updated 8 ಅಕ್ಟೋಬರ್ 2025, 4:58 IST
ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದ ಕ್ರಿಕೆಟ್‌ ಮೈದಾನದಲ್ಲಿ ಟೆಂಟ್‌ ಹಾಕಿರುವುದು.
ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದ ಕ್ರಿಕೆಟ್‌ ಮೈದಾನದಲ್ಲಿ ಟೆಂಟ್‌ ಹಾಕಿರುವುದು.   

ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಆಹಾರ ಹಾಗೂ ಕೃಷಿ ಮೇಳ ಆಯೋಜನೆಗಾಗಿ, ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿರುವ ಕ್ರಿಕೆಟ್‌ ಮೈದಾನದ ಹಸಿರು ನೆಲಹಾಸಿಗೆ ಹಾನಿ ಮಾಡಲಾಗಿದ್ದು, ಕ್ರೀಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನಡೆಯಬೇಕು ಎಂಬ ಜಿಲ್ಲಾಡಳಿತದ ಒತ್ತಾಸೆ ಸ್ವಾಗತಾರ್ಹ. ಆದರೆ ನಗರದಲ್ಲಿರುವ ಏಕೈಕ ಹಸಿರು ನೆಲಹಾಸಿನ ಕ್ರಿಕೆಟ್ ಟೂರ್ನಿಗೆ ಪೂರಕವಾದ ಕ್ರೀಡಾಂಗಣದಲ್ಲಿ ಈ ರೀತಿ ಹತ್ತಾರು ಟೆಂಟ್‌ ನಿರ್ಮಿಸಿ, ಆಹಾರ ಹಾಗೂ ಕೃಷಿ ಮೇಳ ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಹಸಿರು ನೆಲಹಾಸು ಹಾಳಾಗಲಿದೆ. ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದು, ಕ್ರೀಡಾಂಗಣಕ್ಕೆ ಮತ್ತಷ್ಟು ಹಾನಿ ಆಗಲಿದೆ ಎಂದು ಕ್ರೀಡಾಸಕ್ತ ಕೆ.ಆರ್. ಮಂಜುನಾಥ್ ಆರೋಪಿಸಿದ್ದಾರೆ.

ಜಿಲ್ಲಾಡಳಿತಕ್ಕೆ ಮೇಳ ಆಯೋಜನೆ ಮಾಡಬೇಕು ಎಂದಾದರೆ, ಇತರೆ ಕ್ರೀಡಾಂಗಣಗಳು ನಗರದಲ್ಲಿದ್ದು, ಅಲ್ಲಿ ಸೂಕ್ತ ವ್ಯವಸ್ಥೆ ಮಾಡಬಹುದಾಗಿದೆ ಎಂದು ಕ್ರೀಡಾಸಕ್ತ ಸಂಗಮ್ ತಿಳಿಸಿದ್ದಾರೆ.

ADVERTISEMENT

ಪ್ರತಿ ವರ್ಷ ರಾಜಕೀಯ ಸಮಾವೇಶ ಸೇರಿದಂತೆ ಜಿಲ್ಲಾಡಳಿತದಿಂದ ಆಯೋಜನೆ ಆಗುವ ಇತರೆ ಕಾರ್ಯಕ್ರಮಗಳಿಗೆ ಈ ಕ್ರೀಡಾಂಗಣ ಬಳಸಿಕೊಳ್ಳುತ್ತಿದ್ದು, ವರ್ಷಾನುಗಟ್ಟಲೆ ಉತ್ತಮವಾಗಿ ನಿರ್ವಹಣೆ ಮಾಡಿರುವ ಹಸಿರು ನೆಲ ಹಾಳಾಗಲಿದೆ. ಪದೇ ಪದೇ ಇಂತಹ ಕ್ರೀಡಾಂಗಣಗಳಿಗೆ ಹಾನಿಯಾಗುವ ನಿರ್ಧಾರಗಳನ್ನು ಜಿಲ್ಲಾಡಳಿತ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಬ್ಯಾರಿಕೇಡ್‌ನಿಂದ ನಿವಾಸಿಗಳಿಗೆ ದಿಗ್ಬಂಧನ:

ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕಾಗಿ ದೇವಸ್ಥಾನದ ಸುತ್ತಲಿನ ನಿವಾಸಿಗಳಿಗೆ, ಅಂಗಡಿ ಮಾಲೀಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಆರ್‌ಪಿಐ ಸತೀಶ್ ನೇತೃತ್ವದಲ್ಲಿ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಪಿಐ ಸತೀಶ್ ಹಾಗೂ ನಿವಾಸಿಗಳು, ಭಕ್ತರ ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದ ದೇವಸ್ಥಾನದ ಸುತ್ತಲಿನ ನೂರಾರು ಕುಟುಂಬಗಳಿಗೆ ತೊಂದರೆ ಆಗುತ್ತಿದ್ದು, ಮನೆಯ ಬಾಗಿಲ ಎದುರು ಸ್ವಲ್ಪವೂ ಜಾಗ ಬಿಡದೇ ಬ್ಯಾರಿಕೇಡ್ ಹಾಗೂ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನಿವಾಸಿಗಳು ಓಡಾಡುವುದಕ್ಕೂ ತೊಂದರೆಯಾಗಿದೆ ಎಂದು ಆರೋಪಿಸಿದರು.

ಮನೆಯಲ್ಲಿನ ಅನಾರೋಗ್ಯ ಪೀಡಿತ ವ್ಯಕ್ತಿಗಳು ತುರ್ತು ಚಿಕಿತ್ಸೆ ಪಡೆಯಲು ಕಷ್ಟವಾಗಿದೆ. ಜಿಲ್ಲಾಡಳಿತದಿಂದ ಇಲ್ಲಿಯ ನಿವಾಸಿಗಳಿಗೆ ಗುರುತಿನ ಚೀಟಿ ನೀಡಿದ್ದರೂ ಇಲ್ಲಿನ ಬಂದೋಬಸ್ತ್‌ಗೆ ನಿಯೋಜಿಸಿರುವ ಪೊಲೀಸರಿಂದ ನಿತ್ಯವೂ ಕಿರುಕುಳ ಅನುಭವಿಸುವಂತಾಗಿದೆ ಎಂದು ದೂರಿದರು.

ನಿವಾಸಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ನಿವಾಸಿಗಳಾದ ಅಂಬಿಕಾ, ದಿನೇಶ್, ಮಹೇಶ್, ಉಮೇಶ್ ಇದ್ದರು.

ಸ್ಥಳೀಯರಿಗೆ ವಿಶೇಷ ದರ್ಶನಕ್ಕೆ ಅವಕಾಶ ಕೊಡಿ

ಹಾಸನಾಂಬ ದೇವಿ ದರ್ಶನಕ್ಕೆ ಸ್ಥಳೀಯರಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ದೇವಸ್ಥಾನ ಬಾಗಿಲು ತೆರೆಯುವ ದಿನ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಗಿಲೆ ಯೋಗೀಶ್ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನಾಂಬ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಮುಖ್ಯಮಂತ್ರಿವರೆಗೆ ನಾಡಹಬ್ಬ ಎಂದು ಬಿಂಬಿಸಲು ಹೊರಟಿದ್ದಾರೆ.

ಆದರೆ ಇದು ನಮ್ಮೂರ ಜಾತ್ರೆ. ಇತ್ತೀಚೆಗೆ ದೇವಾಲಯಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದು ಈಗ ಸ್ಥಳೀಯರನ್ನೇ ಕಡೆಗಣಿಸಿದ್ದಾರೆ ಎಂದು ದೂರಿದರು. ಹಾಸನಾಂಬ ಉತ್ಸವದ ನೆಪದಲ್ಲಿ ದೇವಸ್ಥಾನದ ಅಕ್ಕಪಕ್ಕದ ನಿವಾಸಿಗಳು ಹಾಗೂ ಅಂಗಡಿ ಮಾಲೀಕರಿಗೆ ಕಿರುಕುಳ ನೀಡಲಾಗುತ್ತಿದೆ. ಮನೆಯಿಂದ ಹೊರ ಹೋಗಲು ಹಾಗೂ ಒಳಗೆ ಬರಬೇಕಾದರೂ ಪಾಸ್ ತೋರಿಸಬೇಕು. ಕೆಲವು ಸಿಬ್ಬಂದಿ ಪಾಸ್ ತೋರಿಸಿದರೂ ಓಡಾಡಲು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು. ಸ್ಥಳೀಯರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಾದ ಶಾಸಕರು ಮೌನ ವಹಿಸಿದ್ದಾರೆ. ಜನರಿಗೆ ಆಗುತ್ತಿರುವ ಸಮಸ್ಯೆ ಕೂಡಲೇ ಪರಿಹರಿಸಬೇಕು. ಸ್ಥಳೀಯರಿಗೆ ವಿಶೇಷ ದರ್ಶನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಶಂಕರ್ ಮಂಜು ಪಂಕಜಾ ಮಮತಾ ಸುಮಾ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.