
ಹಾಸನ: ಶಾಂತಲಾ ಲಲಿತ ಕಲಾ ಶಾಲೆ ಹಾಗೂ ಶಾಂತಲಾ ಆರ್ಟ್ ಕ್ಲಬ್ ವತಿಯಿಂದ ನಗರದ ಎವಿಕೆ ಮಹಿಳಾ ಕಾಲೇಜಿನ ಎದುರು ಶನಿವಾರ ಮತ್ತು ಭಾನುವಾರ ನಡೆದ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಕಲಾವಿದರ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ನಗರದ ಸುಮಾರು 800ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದರು. ಬಹುತೇಕ ಮಕ್ಕಳು ಪರಿಸರಕ್ಕೆ ಸಂಬಂಧಪಟ್ಟ ಚಿತ್ರಕಲೆಯನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು, ನೋಡುಗರ ಗಮನ ಸೆಳೆಯಿತು. ಕೆಲವು ಮಕ್ಕಳು ಸುಂದರವಾದ ಮನೆ, ಬಾತುಕೋಳಿ, ಹೂವು, ಹೂವಿನೊಂದಿಗೆ ಚಿಟ್ಟೆ, ನೀರಿನೊಂದಿಗೆ ಮೀನು, ಪ್ರಕೃತಿ, ನವಿಲು, ಮಂಡಲ ಚಿತ್ರ, ಪ್ರಾಣಿಗಳೊಂದಿಗೆ, ಪರಿಸರ, ಶಾಂತಿ ಸಂಕೇತದ ಬುದ್ಧನ ಚಿತ್ರ ಹೀಗೆ ಚಿತ್ತಾರದ ಚಿತ್ರಗಳನ್ನು ಚಿತ್ರಿಸಿದರು. ಮತ್ತಷ್ಟು ಮಕ್ಕಳು ಮನೆ, ಮೋಡ, ಸೂರ್ಯ, ದೇವಾಲಯ, ಮಹಿಳೆಯರು ಹೀಗೆ ಬಗೆಬಗೆಯ ಚಿತ್ರಗಳನ್ನು ಚಿತ್ರಿಸಿ ಬಣ್ಣಗಳನ್ನು ತುಂಬಿದರು.
ನಗರದ 24 ಮಂದಿ ಕಲಾವಿದರಿಂದ ಸಮೂಹ ಚಿತ್ರಕಲಾ ಪ್ರದರ್ಶನವು ನಡೆಯಿತು. ಕಲಾವಿದರಾದ ಸ್ಪೂರ್ತಿ, ದಿವ್ಯಾಭಾರತಿ, ಭವಾನಿ, ಅಕ್ಷತಾ ಯು.ಎಂ. ಬಸವರಾಜು, ದೇವರಾಜು, ಅಜಿತ್, ಯಶವಂತ್, ಲತಾ, ನಂದಿನಿ, ಚಂದ್ರಪ್ರಭಾ, ವಿಮಲಾ, ಬಸವರಾಜ್, ಶಿವಕುಮಾರ್, ಶೋಭಾಪ್ರಭಾಕರ್, ಅಶ್ವಿನಿ, ಮಂಜುಳಾ, ಶೋಭಾ ಸಿ.ಎನ್. ಶಿವಕುಮಾರ್, ಪ್ರೇಮಾ, ಸ್ಪ್ರೀಂಗ್ ಸನ್, ಕೋಮಲ ಜೈನ್, ಭವಾನಿ, ಕಿರಣ್ ಟಿ.ಆರ್., ಸೌಮ್ಯಾ ಎಸ್., ಪುನೀತ್ ನಾಯಕ್, ವೃತ್ತಿಕ್, ಹೇಮಲತಾ, ಪ್ರೇಮಾ, ಬಬಿತಾ ಸಿ.ಎಸ್., ಲತಾ ಎಲ್.ಜಿ. ಅಸ್ಮತರ, ಬಸವರಾಜ್ ಸಿ.ಎಸ್., ಕೆ.ಜೆ.ಶಿವಶಂಕರ್, ಆರ್ .ಶಿವಕುಮಾರ್, ನಂದಿನಿ, ಚಂದ್ರಕಾಂತ್ ನಯ್ಯರ್, ಯೋಗಾನಂದ, ಎಚ್.ಎನ್, ನಿಜಾಮುದ್ದಿನ್, ಲಕ್ಷ್ಮಿ, ತಮ್ಮ ಕಲೆಯನ್ನು ಪ್ರದರ್ಶಿಸಿದರು.
2X2, 5X4, 4X4 ಅಡಿ ಕ್ಯಾನ್ವಾಸ್ನಲ್ಲಿ ಆಕ್ರಾಲಿಕ್, ತೈಲವರ್ಣ, ಜಲವರ್ಣ, ಪೆನ್ಸಿಲ್ ಡ್ರಾಯಿಂಗ್ನಲ್ಲಿ ಗಣೇಶ, ಲಾಟೀನ್, ಪುಸ್ತಕ ಚಕ್ರ, ಜಗ್ಗು, ಹುಡುಗಿಯರು, ಬುದ್ದ, ಕಡವೆ, ಮಳೆಯಲ್ಲಿ ನೆನೆಯುತ್ತಿರುವ ಹುಡುಗಿ, ಕುಂಬಳ ಹೀಗೆ ಪೋಟ್ರೈಟ್, ಸ್ಟಿಲ್ಲೈಫ್, ಲ್ಯಾಂಡ್ಸ್ಕೇಪ್ನಲ್ಲಿ ಚಿತ್ತಾರದ ಚಿತ್ರಾಕರ್ಷಕ ಕಲೆಗಳನ್ನು ಅಭಿವ್ಯಕ್ತ ಪಡಿಸಿದರು.
ಕಲಾಪ್ರದರ್ಶನ ಉದ್ಘಾಟಿಸಿದ ಅಂತರ ರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಚಿತ್ರಕಲೆ ಅಷ್ಟು ಸುಲಭವಲ್ಲ. ಇದು ಕಠಿಣ. ಅದನ್ನು ತಪಸ್ಸಿನಂತೆ ಬದುಕಿನಲ್ಲಿ ಅಳವಡಿಸಿಕೊಂಡು ಕಠಿಣ ಪರಿಶ್ರಮಪಟ್ಟರೆ ಮಾತ್ರ ಕಲೆ ನಮಗೆ ದಕ್ಕುತ್ತದೆ ಎಂದು ವಿಮರ್ಶಿಸಿದರು.
ಕಲಾವಿದ ತನ್ನ ಕುಂಚದ ಮೂಲಕ ಕ್ಯಾನ್ವಾಸ್ನಲ್ಲಿ ಹಾಸ್ಯ, ನಗು, ದುಃಖ ಎಲ್ಲವನ್ನೂ ಅಭಿವ್ಯಕ್ತಪಡಿಸಿರುತ್ತಾನೆ. ಅದನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ನೋಡುಗನನ್ನು ಯೋಚನೆಗೆ ಒಳಪಡಿಸಿದರೆ, ಅದು ಉತ್ತಮ ಕಲೆಯಾಗುತ್ತದೆ. ಒಂದು ಕಲೆ ಕಾದಂಬರಿ, ಕವಿತೆ, ನಾಟಕ, ಬರೆದಷ್ಟೇ ಶಕ್ತಿಶಾಲಿಯಾಗಿರುತ್ತದೆ ಎಂದು ಹೇಳಿದರು.
ಸಾಹಿತಿಗಳಾದ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್, ಸುಂದರೇಶ್ ಉಡುವಾರೆ ಮಾತನಾಡಿದರು. ಕಲಾವಿದ ಬಸವರಾಜ್ ಸ್ವಾಗತಿಸಿದರು. ಕಲಾವಿದೆ ಲತಾ ವಂದಿಸಿದರು. ಶಿವಕುಮಾರ್ ನಿರೂಪಿಸಿದರು.
ಮಕ್ಕಳು ಮೊಬೈಲ್ ಗೀಳು ಬಿಟ್ಟು ಚಿತ್ರಕಲೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಬಾಲ್ಯದಲ್ಲಿಯೇ ಮಕ್ಕಳು ಕಲೆಯನ್ನು ಅಭ್ಯಾಸ ಮಾಡಿದರೆ ಮುಂದಿನ ಬದುಕಿಗೆ ಅದು ಸಹಾಯವಾಗುತ್ತದೆ-ಎಚ್.ಎಸ್. ಮಂಜುನಾಥ್, ಲಲಿತಕಲಾ ಅಕಾಡೆಮಿ ಸದಸ್ಯ
ಬಾಲ್ಯದಿಂದಲೇ ಮಕ್ಕಳು ಚಿತ್ರಕಲೆಯಲ್ಲಿ ತೊಡಗಿಕೊಂಡರೆ ಸೌಂದರ್ಯಪ್ರಜ್ಞೆ ಮೂಡುತ್ತದೆ. ಮನಸ್ಸಿಗೆ ಮುದ ನೀಡುವುದು ಏಕಾಗ್ರತೆ ಪರಿಪಕ್ವತೆ ಕ್ರಿಯಾಶೀಲತೆಯಾಗಿರಲು ಸಾಧ್ಯವಾಗುತ್ತದೆ-ದೇಸಾಯಿ, ಕಲಾವಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.