ಪ್ರಜಾವಾಣಿ ವಾರಹಾಸನ: ಇಲ್ಲಿನ ಸದಾಶಿವನಗರದಲ್ಲಿ ಖಾಸಗಿ ಬ್ಯಾಂಕ್ ಉದ್ಯೋಗಿ ನವೀನ್ ಅವರ ಮನೆಯ ಬೀಗ ಒಡೆದು, 1 ಕೆ.ಜಿ. ಚಿನ್ನ ಹಾಗೂ ₹15 ಲಕ್ಷ ನಗದು ಕಳವು ಮಾಡಲಾಗಿದೆ.
ವರ ಮಹಾಲಕ್ಷ್ಮಿ ಹಬ್ಬದ ನಿಮಿತ್ತ ಬ್ಯಾಂಕ್ ಲಾಕರ್ನಿಂದ ತಂದಿದ್ದ ಚಿನ್ನ–ಬೆಳ್ಳಿ ಆಭರಣಗಳ ಜೊತೆಗೆ ಹೊಸ ಮನೆ ಕಾಮಗಾರಿಗೆ ಇಟ್ಟಿದ್ದ ನಗದು ದೋಚಲಾಗಿದೆ. ನವೀನ್ ದಂಪತಿ ಗುರುವಾರ ರಾತ್ರಿ ತಮ್ಮ ಪತ್ನಿಯ ತಾಯಿ ಮನೆಯಲ್ಲಿ ತಂಗಿದ್ದನ್ನು ಗಮನಿಸಿದ ಕಳ್ಳರು ಸುಲಭವಾಗಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ನವೀನ್ ದಂಪತಿ ಮನೆಗೆ ಬಂದಾಗ ಬಾಗಿಲು ಒಡೆದಿತ್ತು. ಒಳಗೆ ಹೋಗಿ ನೋಡಿದಾಗ, ಚಿನ್ನಾಭರಣ ಮತ್ತು ನಗದು ಕಳವಾಗಿರುವುದು ಗೊತ್ತಾಗಿದೆ. ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.