
ಹಳೇಬೀಡು: ಅಡಗೂರು ಗ್ರಾಮದಲ್ಲಿ ಬಸ್ ನಿಲ್ಲಿಸುವ ಸ್ಥಳದಲ್ಲಿ ರಸ್ತೆಯ ಎರಡೂ ಕಡೆ ಶೆಲ್ಟರ್ ನಿರ್ಮಾಣ ಹಾಗೂ ರಸ್ತೆ ವಿಸ್ತರಣೆಗಾಗಿ ರಸ್ತೆಯ ಎರಡೂ ಬದಿಯಲ್ಲಿದ್ದ ಅಂಗಡಿ ಮಳಿಗೆ ಹಾಗೂ ಗೂಡಂಗಡಿಗಳನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಶುಕ್ರವಾರ ತೆರವು ಮಾಡಲಾಯಿತು.
ಕಟ್ಟಡ ತೆರವು ಕಾರ್ಯಾಚರಣೆ ಹಿಂದೆ ಎರಡೂ ಭಾರಿ ವಿಫಲವಾಗಿದ್ದರಿಂದ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ತಹಶೀಲ್ದಾರ್ ಶ್ರೀಧರ ಕಂಕಣವಾಡಿ ನೇತೃತ್ವದಲ್ಲಿ ಅಧಿಕಾರಿಗಳು ಕಟ್ಟಡ ಮಾಲೀಕರೊಂದಿಗೆ ಮಾತುಕಥೆ ನಡೆಸಿದರು. ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಡುವೆ ಒಂದು ಗಂಟೆ ಚರ್ಚೆ ನಡೆಯಿತು. ತೊಂದರೆ ಮಾಡುವ ಉದ್ದೇಶದಿಂದ ಕಟ್ಟಡ ತೆರವು ನಡೆಯುತ್ತಿಲ್ಲ. ಸಾರ್ವಜನಿಕ ಹಿತ ದೃಷ್ಟಿಯಿಂದ ಕಾಮಗಾರಿ ಕೈಗೊಳ್ಳುವ ಉದ್ದೇಶದಿಂದ ಕಟ್ಟಡ ತೆರವು ಮಾಡಲಾಗುತ್ತಿದೆ. ಪ್ರಯಾಣಿಕರು ರಸ್ತೆಯಲ್ಲಿಯೆ ಬಸ್ ಕಾಯುವುದು ಸುರಕ್ಷಿತವಲ್ಲ. ರಸ್ತೆಯ ಎರಡೂ ಕಡೆ ಪ್ರಯಾಣಿಕರು ಬಸ್ ಬರುವವರೆಗೆ ಕೂರುವಂತಹ ಶೆಲ್ಟರ್ ನಿರ್ಮಾಣ ಹಾಗೂ ರಸ್ತೆ ವಿಸ್ತರಣೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಕಾರ್ಯಪ್ರವೃತ್ತರಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಹಶೀಲ್ದಾರ್ ಶ್ರೀಧರ ಕಂಕಣವಾಡಿ ಹೇಳಿದರು.
ತಹಶೀಲ್ದಾರ್ ಹಾಗೂ ಅಧಿಕಾರಿಗಳ ಮಾತಿಗೆ ಒಪ್ಪಿಕೊಂಡ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವು ಮಾಡಿಕೊಡುತ್ತೇವೆ ಎಂದು ಒಪ್ಪಿಗೆ ಸೂಚಿಸಿದರು. 15 ಅಂಗಡಿಗಳ ಮಾಲೀಕರು ಸ್ವತಃ ತೆರವು ಮಾಡಲು ಮುಂದಾದರು. ಹಳೇಯ ತಂಗುದಾಣ ಹಾಗೂ ಗೂಡಂಗಡಿಯ ಅವಶೇಷಗಳನ್ನು ಜೆಸಿಬಿಯಿಂದ ತೆರವು ಮಾಡಿಸಿದರು. ರಾಜ್ಯ ಮೀಸಲು ಪಡೆ ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್, ರಾಷ್ಟೀಯ ಹೆದ್ದಾರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಎಂ.ವಿಘ್ನೇಶ್ವರ, ಎಇಇ ಸೌಮ್ಯ, ಲೋಕೋಪಯೋಗಿ ಎಇಇ ಕೃಷ್ಣೇಗೌಡ ತಹಶೀಲ್ದಾರ್ ಅವರೊಂದಿಗೆ ಕಟ್ಟಡ ಮಾಲೀಕರ ಸಂಧಾನದಲ್ಲಿ ಭಾಗವಹಿಸಿದ್ದರು.
ಡಿವೈಎಸ್ಪಿ ಗೋಪಿನಾಥ್, ಇನ್ಸ್ಪೆಕ್ಟರ್ಗಳಾದ ಜಗದೀಶ್, ಕೃಷ್ಣಕುಮಾರ್, ರೇವಣ್ಣ, ಪಿಎಸ್ಐ ಸಿದ್ದಲಿಂಗ ಬಾನಸೆ ಬಂದೋಬಸ್ತ್ ಕ್ರಮ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.