ADVERTISEMENT

ಹಾಸನ: ಬಸ್ ಚಕ್ರ ಕಳಚಿದರೂ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಕೇಂದ್ರ ಬಸ್ ನಿಲ್ದಾಣ ಬಳಿ ಘಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:30 IST
Last Updated 3 ಜನವರಿ 2026, 7:30 IST
ಹಾಸನದ ಜಿಲ್ಲಾ ನ್ಯಾಯಾಲಯದ ಬಳಿ ರಸ್ತೆಯಲ್ಲಿ ನಿಂತಿರುವ ಬಸ್‌ 
ಹಾಸನದ ಜಿಲ್ಲಾ ನ್ಯಾಯಾಲಯದ ಬಳಿ ರಸ್ತೆಯಲ್ಲಿ ನಿಂತಿರುವ ಬಸ್‌    

ಹಾಸನ: ನಗರದ ಕೇಂದ್ರ ಬಸ್‌ ನಿಲ್ದಾಣದ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಬೇರಿಂಗ್ ತುಂಡಾಗಿ ಮುಂದಿನ ಚಕ್ರ ಕಳಚಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ.

ಬೆಂಗಳೂರು ಡಿಪೋಗೆ ಸೇರಿದ ಬೆಂಗಳೂರು–ಹಾಸನ–ಚಿಕ್ಕಮಗಳೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್, ನಗರದ ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಶುಕ್ರವಾರ ಚಿಕ್ಕಮಗಳೂರು ಕಡೆಗೆ ಹೊರಟಿತ್ತು. ನಗರದ ಜಿಲ್ಲಾ ನ್ಯಾಯಾಲಯದ ಎದುರಿನ ಫ್ಲೈಓವರ್ ಬಳಿ ಸಾಗುತ್ತಿದ್ದ ವೇಳೆ ಏಕಾಏಕಿ ಬಸ್‌ನ ಬೇರಿಂಗ್ ತುಂಡಾಗಿದ್ದು, ಮುಂದಿನ ಬಲ ಬದಿಯ ಚಕ್ರ ಸಂಪೂರ್ಣವಾಗಿ ಕಳಚಿಕೊಂಡಿದೆ.

ಅಪಾಯದ ನಡುವೆಯೂ ಚಾಲಕ ಧೈರ್ಯ ಹಾಗೂ ಸಮಯಪ್ರಜ್ಞೆ ಪ್ರದರ್ಶಿಸಿ, ನಿಯಂತ್ರಣ ಕಳೆದುಕೊಳ್ಳದಂತೆ ಬಸ್ ಅನ್ನು ನಿಧಾನವಾಗಿ ರಸ್ತೆ ಬದಿಗೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಾಲಕನ ಕ್ರಮದಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ADVERTISEMENT

ಘಟನೆ ನಡೆದ ತಕ್ಷಣ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಬಳಿಕ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಪ್ರಯಾಣಿಕರನ್ನು ಬೇರೆ ಬಸ್‌ಗಳ ಮೂಲಕ ಕಳುಹಿಸಿದರು.

ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಸ್‌ನ ತಾಂತ್ರಿಕ ದೋಷವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ಈ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ನ ಬಲಬದಿಯ ಚಕ್ರ ಕಳಚಿ ಬಿದ್ದಿದೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.