
ಆಲೂರು: ಮನುಷ್ಯನನ್ನು ಭೂಮಿ ಕೈಬಿಟ್ಟರೂ ಗೋಮಾತೆ ಕೈ ಬಿಡುವುದಿಲ್ಲ ಎಂದು ಕಾರ್ಜುವಳ್ಳಿ ಮಠಾಧೀಶ ಶಿವಾಚಾರ್ಯ ಸ್ವಾಮಿಜಿ ತಿಳಿಸಿದರು.
ಪಾಳ್ಯ ಹೋಬಳಿ ಯಲಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಾಲು ಉತ್ಪಾದಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಗೋವಿನಿಂದ ಪ್ರತಿಯೊಂದು ಫಲವನ್ನು ಮಾನವ ಕಂಡುಕೊಂಡಿದ್ದಾನೆ. ಇತ್ತಿಚೆಗೆ ದೇಶದಲ್ಲಿ ಕ್ಷೀರಕ್ರಾಂತಿಯಾದ ನಂತರ ಹಾಲು ಒಕ್ಕೂಟಗಳು ವಿಶೇಷವಾಗಿ ಬೆಳೆದು ನಿಂತಿವೆ. ರಾಜ್ಯದಲ್ಲಿ ಹಾಲು ಉತ್ಪಾದನೆಲಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಹಾಸನ ಹಾಲು ಒಕ್ಕೂಟ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆ. ಇತ್ತಿಚೆಗೆ ಕೃತಕ ಹಾಲು ಉತ್ಪಾದನೆಯಲ್ಲಿ ರಾಸಾಯನಿಕ ಬೆರೆಸಿ ಮಾರಾಟ ಮಾಡುತ್ತಿರುವುದು ಆಘಾತಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಹಾಲು ಒಕ್ಕೂಟದಿಂದ ತಯಾರಾಗುವ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ ಇದೆ. ಯುವಜನರು ಹೈನುಗಾರಿಕೆಯಲ್ಲಿ ತೊಡಗಬೇಕು. ಆಡಳಿತ ಮಂಡಳಿ ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ. ಎಸ್. ಮಂಜೇಗೌಡರು ಮಾತನಾಡಿ, ‘ಗೋವುಗಳನ್ನು ಸಾಕಿ ಅದರ ಉಪಯೋಗ ಪಡೆದುಕೊಂಡವರಿಗೆ ಮಾತ್ರ ಪಡೆದ ಫಲ ಅರ್ಥವಾಗುತ್ತದೆ. ಹೈನುಗಾರಿಕೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲು ಸಹಕಾರಿಯಾಗಿದೆ’ ಎಂದರು.
ಕೆ.ಎಂ.ಎಫ್. ನಿರ್ದೇಶಕ ಪಿ. ಲಿಂಗರಾಜು, ಆಡಳಿತ ಅಧಿಕಾರಿ ಸೌಜನ್ಯ, ಸಂಘದ ಅಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಯೋಗೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.