ಹಾಸನ: ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಕಾರ್ಯಾರಂಭ ಮಾಡುವಂತೆ ಆಗ್ರಹಿಸಿ ಜನಪರ ಚಳವಳಿಗಳ ಒಕ್ಕೂಟದ ಸದಸ್ಯರು ಆಸ್ಪತ್ರೆ ಕಟ್ಟಡದ ಎದುರು ಶುಕ್ರವಾರ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಸತ್ಯಾಗ್ರಹ ನಡೆಸಿದರು.
ಕೆಪಿಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ನಮಗೆ ತಿಳಿದ ಮಾಹಿತಿಯಂತೆ ಹಾಗೂ ಇಲ್ಲಿನ ತಜ್ಞರು ಹೇಳುವಂತೆ ₹ 60 ಕೋಟಿ ಅನುದಾನ ಅಗತ್ಯವಿದೆ. ಇದರಿಂದ ಉಳಿದಿರುವ ಸಿವಿಲ್ ಕಾಮಗಾರಿ ಸೇರಿದಂತೆ ಅಗತ್ಯ ಸಲಕರಣೆ ಹಾಗೂ ವೈದ್ಯರನ್ನು ನೇಮಿಸಿಕೊಳ್ಳಬಹುದಾಗಿದೆ ಎಂದರು.
ಈ ಆಸ್ಪತ್ರೆ ಪ್ರಾರಂಭ ಮಾಡಿದರೆ ಜಿಲ್ಲೆ ಸೇರಿದಂತೆ ಸುಮಾರು 5-6 ಜಿಲ್ಲೆಗಳ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಬಹುದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಕೂಡಲೇ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಸ್ಪತ್ರೆ ಕಟ್ಟಡ ನಿರ್ಮಿಸಿ ಈಗಾಗಲೇ ಎರಡು ವರ್ಷ ಕಳೆದಿದ್ದು, ಮತ್ತಷ್ಟು ವಿಳಂಬ ಮಾಡಿದರೆ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಉಪಯೋಗಕ್ಕೆ ಬಾರದಂತಾಗಲಿದೆ. ಕೂಡಲೇ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿ ಧರಣಿ ನಡೆಸುತ್ತಿದ್ದೇವೆ. ಎಲ್ಲ ಜನಪರ ಚಳವಳಿಗಳ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದಾರೆ ಎಂದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಲೇಖಕಿ ರೂಪ ಹಾಸನ್, ಪತ್ರಕರ್ತ ಆರ್.ಪಿ. ವೆಂಕಟೇಶ ಮೂರ್ತಿ, ಅನ್ಶದ್ ಪಾಳ್ಯ, ಕೆ.ಟಿ. ಶಿವಪ್ರಸಾದ್, ಭಾನುಮತಿ, ಚಿನ್ನೇನಹಳ್ಳಿ ಸ್ವಾಮಿ, ಎಂ.ಜಿ. ಪೃಥ್ವಿ, ಮಮತಾ ಶಿವು, ರಮೇಶ್, ಸಮೀರ್ ಅಹಮದ್, ಅಹಮ್ಮದ್ ಹಗರೆ, ಅರವಿಂದ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಸತ್ಯಾಗ್ರಹ 5-6 ಜಿಲ್ಲೆಗಳ ಸಾರ್ವಜನಿಕರಿಗೆ ಆರೋಗ್ಯ ಸೇವೆ ಲಭ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.