ಹಾಸನ: ಜಿಲ್ಲೆಯ ಅರಕಲಗೂಡು, ಸಕಲೇಶಪುರ, ಬೇಲೂರು ತಾಲ್ಲೂಕಿನಲ್ಲಿ ಬುಧವಾರ ತಡರಾತ್ರಿ ಹಾಗೂ
ಗುರುವಾರ ಬೆಳಗಿನ ಜಾವ ಸುರಿದ ಅಕಾಲಿಕ ಮಳೆಯಿಂದ ಕಾಫಿ, ಭತ್ತ, ರಾಗಿ ನೀರಿನಲ್ಲಿ ಮುಳಗಿದ್ದು,
ಬದುಕು ಮೂರಾಬಟ್ಟೆಯಾಗಿದೆ. ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದ ಕಟಾವು ನಡೆಸಿದ ಭತ್ತ
ಹುಲ್ಲು ನೀರಿನಲ್ಲಿ ಮುಳುಗಿ ಕರಗುತ್ತಿದೆ.
ಹೇಮಾವತಿ, ಕಾವೇರಿ ನದಿ ನಾಲಾ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಭತ್ತದ ಬೆಳೆ
ಬೆಳೆದಿದ್ದು, ಕೆಲವೆಡೆ ಕಟಾವು ಮುಗಿಸಿ ಬಣವೆ ಹಾಕಿದ್ದಾರೆ. ಇನ್ನು ಕೆಲವು ಕಡೆ ಬೆಳೆದು ನಿಂತಿದ್ದ ರಾಜಮುಡಿ
ಭತ್ತ ಮಳೆಗೆ ಹಾನಿಯಾಗಿದೆ. ಕಟಾವು ಮಾಡಿ ಗದ್ದೆಗಳಲ್ಲಿ ಅರಿ ಹಾಕಿದ್ದ ಭತ್ತದ ಹುಲ್ಲು ಜಲಾವೃತವಾಗಿದೆ. ಆಲೂರು ತಾಲ್ಲೂಕಿನ ಕಣತೂರು, ಮುರುಡೂರು, ಬಾವಸವಳ್ಳಿ, ಕಲ್ಲಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆ ನಾಶವಾಗಿದೆ.
ಬೇಲೂರು ತಾಲ್ಲೂಕಿನಲ್ಲಿ ಗಿಡದಲ್ಲಿದ್ದ ಹಾಗೂ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿದೆ. ಸಕಲೇಶಪುರ ಭಾಗದಲ್ಲಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಮಳೆ ನೀರಿನಲ್ಲಿ ನೆನೆದ ಪರಿಣಾಮ ಕಾಫಿ ಬೀಜಗಳ ಗುಣಮಟ್ಟ ಹಾಳಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.