ಕೊಣನೂರು: ಪ್ರತಿ ಕೆ.ಜಿ. ಹೊಗೆಸೊಪ್ಪಿಗೆ ₹320 ಬೆಲೆ ದೊರೆತಿದ್ದು, ಬೆಳೆಗಾರರಲ್ಲಿ ಉತ್ತಮ ಬೆಲೆಯ ದೊರಕುವ ನಿರೀಕ್ಷೆ ತಂದಿದೆ.
ಬುಧವಾರ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಪ್ರಾರಂಭವಾದ ಪ್ರಸಕ್ತ ಸಾಲಿನ ಅಧಿಕೃತ ಹರಾಜಿನಲ್ಲಿ ಪ್ರತಿ ಕೆ.ಜಿ. ಉತ್ತಮ ದರ್ಜೆಯ ಹೊಗೆಸೊಪ್ಪು ₹320ಗೆ ಮಾರಾಟವಾಯಿತು. ಮೊದಲ ದಿನವೇ ವಹಿವಾಟಿನಲ್ಲಿ 63ನೇ ಪ್ಲಾಟ್ ಫಾರಂನಲ್ಲಿ ಮಾರಾಟಕ್ಕೆ ಬಂದಿದ್ದ 18 ಬೇಲ್ಗಳು ಮಾರಾಟವಾಗಿ, ಒಟ್ಟು 2148 ಕೆ.ಜಿ ಹೊಗೆಸೊಪ್ಪು ₹6.87 ಲಕ್ಷಕ್ಕೆ ಮಾರಾಟವಾಯಿತು.
ಪ್ಲಾಟ್ ಫಾರಂ 7ರಲ್ಲಿ 18 ಬೇಲ್ಗಳು ಮಾರಾಟವಾಗಿ ಪ್ರತಿ ಕೆ.ಜಿ ಹೊಗೆಸೊಪ್ಪಿಗೆ ₹320 ರಂತೆ 2373 ಕೆ.ಜಿ ಸೊಪ್ಪಿಗೆ ಒಟ್ಟು ₹7.59 ಲಕ್ಷ ವ್ಯವಹಾರ ನಡೆಯಿತು. ಮೊದಲ ದಿನವೆ 5 ಕಂಪನಿಗಳು ಮಾರಾಟ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.
ಸಂಸದ ಶ್ರೇಯಸ್ ಪಟೇಲ್ ಮಾರುಕಟ್ಟೆಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ತಂಬಾಕು ಹರಾಜು ಪ್ರಕ್ರಿಯೆ ವೀಕ್ಷಿಸಿ ಅಧಿಕಾರಿಗಳು ಮತ್ತು ತಂಬಾಕು ಬೆಳೆಗಾರರೊಂದಿಗೆ ಚರ್ಚೆ ನಡೆಸಿದರು. ‘ತಂಬಾಕು ಬೆಳೆಗಾರರ ಸಂಕಷ್ಟಗಳನ್ನು ಕಂಡು ತಿಳಿದಿದ್ದು ತಂಬಾಕು ಬೆಳೆಗಾರರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಸಂಸದನಾಗಿ ನನ್ನ ಕರ್ತವ್ಯ’ ಎಂದರು.
ಸಂಸದನಾದ ಪ್ರಾರಂಭದ ದಿನದಿಂದಲೂ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದಿದ್ದು ಹಂತ ಹಂತವಾಗಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಮೊದಲ ದಿನದ ವಹಿವಾಟಿನಲ್ಲಿ ಉತ್ತಮ ಬೆಲೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಇಂದಿನ ಬೆಲೆಗಿಂತ ಕಡಿಮೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದರು.
ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಪಿ.ಶ್ರೀಧರ್ ಗೌಡ, ಮಾರುಕಟ್ಟೆ ಅಧೀಕ್ಷಕಿ ಸವಿತಾ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಸೊಮಶೇಖರ್, ಮುಖಂಡರು, ರೈತ ಸಂಘದ ಮುಖಂಡರು , ಬೆಳೆಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.