ADVERTISEMENT

ಹಾಸನ | ಸ್ವಾವಲಂಬಿ ಬದುಕು ರೂಪಿಸಿಕೊಳ್ಳಿ: ಕೆ.ಎಸ್‌. ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:55 IST
Last Updated 21 ನವೆಂಬರ್ 2025, 6:55 IST
ಹಾಸನದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರನ್ನು ಸನ್ಮಾನಿಸಲಾಯಿತು
ಹಾಸನದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರನ್ನು ಸನ್ಮಾನಿಸಲಾಯಿತು   

ಹಾಸನ: ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ಅವುಗಳನ್ನು ಬಳಕೆ ಮಾಡಿಕೊಂಡು ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ತಿಳಿಸಿದರು.

ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಬುಧವಾರ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಮಹಿಳೆಯರು ಎರಡನೇ ಪ್ರಜೆಯಾಗಿ ಏಕೆ ಜೀವನ ಮಾಡುತ್ತಿದ್ದೇವೆ ಎಂಬ ಜಿಜ್ಞಾಸೆ ನಮಗೂ ಇದೆ. ಶಿಕ್ಷಣ ಒಂದು ಆಭರಣ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಸ್ವತಂತ್ರರಾಗಿ ಇರಬೇಕು. ನೀವು ಇನ್ನೊಬ್ಬರ ಬಳಿ ಕೈ ಚಾಚುವುದಕ್ಕಾಗಿ ಜನಿಸಿಲ್ಲ. ನಿಮಗೆ ನಿಮ್ಮದೇ ಆದ ಗುರುತು, ಶಕ್ತಿ ಇದೆ. ಅದನ್ನು ನೀವು ಅರ್ಥಮಾಡಿಕೊಳ್ಳಬೇಕು ಎಂದರು.

ADVERTISEMENT

ಕಾಲೇಜಿನ ದಿನಗಳು ಸುಂದರ ಜೀವನದ ಆರಂಭ. ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಡ್ರೆಸ್ಸಿಂಗ್, ಪ್ರೀತಿ, ಸಂಬಂಧಗಳು ಎಂದು ಸಮಯ ಕಳೆಯುವುದು ಬೇಡ. ಅವಾವೂ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಬೇಕಿಲ್ಲದ ವಿಷಯಗಳಿಗೆ ಗಮನ ಕೊಡುವುದನ್ನು ಬಿಟ್ಟು, ನಿಜವಾಗಿಯೂ ಗೌರವಯುತವಾಗಿ ಬದುಕಲು ಶಿಕ್ಷಣ ಪಡೆಯುವ ಮೂಲಕ ಪ್ರತಿಯೊಬ್ಬರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಉದ್ಯೋಗವನ್ನು ತೆಗೆದುಕೊಳ್ಳಲೇಬೇಕು ಎಂಬ ದೃಢ ನಿರ್ಧಾರದಿಂದ ನಿತ್ಯ 12 ರಿಂದ 14 ಗಂಟೆಗಳು ನಿರಂತರವಾಗಿ ಓದುವಾಗ, ನಿಮ್ಮ ಸಂಬಂಧಿಕರು ಸೇರಿ ಅನೇಕರು ನಿಮ್ಮನ್ನು ನಿರುತ್ಸಾಹಗೊಳಿಸಿ, ಅನುಮಾನ ಪಡುತ್ತಾರೆ. ಅಲ್ಲದೇ, ನಿಮ್ಮನ್ನು ತುಳಿಯುವುದಕ್ಕೆ ಪ್ರಯತ್ನಿಸುತ್ತಾರೆ. ಅದನ್ನು ಮೆಟ್ಟಿ ನಿಂತು ಧೈರ್ಯವಾಗಿ ನಿಮ್ಮ ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಜೀವನ ಬಹಳ ಕಠಿಣ. ಹೆಣ್ಣು ಮಕ್ಕಳು ಯಾವುದೇ ಉದ್ಯೋಗವಿರಲಿ ಸ್ವತಂತ್ರರಾಗಿರಿ. ಯಾರಿಂದಲೂ, ಯಾವುದನ್ನೂ ನಿರೀಕ್ಷೆ ಮಾಡದೇ, ಯಾರ ಮೇಲೂ ಅವಲಂಬಿತವಾಗದೇ, ಕೀಳರಿಮೆ ಬಿಟ್ಟು, ಯಾವುದೇ ವಿಚಾರಕ್ಕೂ ಅಂಜದೇ, ಧೈರ್ಯವಾಗಿ ನಿಮ್ಮ ಕೌಶಲಗಳನ್ನು ಉತ್ತಮ ಪಡಿಸಿಕೊಂಡು ಸಾಧನೆ ಮಾಡಿ ಎಂದು ತಿಳಿಸಿದರು.

ಮೊದಲು ನಿಮ್ಮನ್ನು ನೀವು ಗೌರವಿಸಿಕೊಂಡರೆ, ಇತರರು ನಿಮ್ಮನ್ನು ಗೌರವಿಸುತ್ತಾರೆ. ಹಾಗಾಗಿ ನಿಮ್ಮ ಮೇಲೆ ನೀವು ಅಗೌರವ ಹೊಂದಬೇಡಿ. ನೀವು ಏನು ಎಂದು ಮತ್ತೊಬ್ಬರು ವ್ಯಾಖ್ಯಾನಿಸುವುದಕ್ಕೆ ಅವಕಾಶ ಕೊಡಬೇಡಿ. ನಿಮ್ಮ ಬಲಹೀನತೆ ಮತ್ತು ನಿಮ್ಮ ಶಕ್ತಿ ಏನು ಎಂಬುದು ಗೊತ್ತಿದೆ ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿರಬೇಕು ಎಂದರು.

ನಿಮ್ಮ ಜೀವನದ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಬೇಕು. ಏನನ್ನು ಕಲಿಯುತ್ತಾ ಹೋಗುತ್ತಿರೋ, ಅದೇ ನಿಮ್ಮ ನಿಜವಾದ ಆಸ್ತಿ. ನಿಮ್ಮ ಜೀವನವನ್ನು ಸುಂದರವಾಗಿ ಆತ್ಮನಿರ್ಭರವಾಗಿ ರೂಪಿಸಿಕೊಳ್ಳಿ. ಯಾವುದೇ ಉಡುಗೊರೆ ಅಪೇಕ್ಷಿಸದೇ, ಅಂಥವುಗಳಿಗೆ ಆಕರ್ಷಿತರಾಗದಂತೆ ಗೌರವಯುತವಾಗಿ ಜೀವನ ನಡೆಸಿ ಎಂದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸಿ.ಆರ್. ಜಗದೀಶ್ ಚೌಡುವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎಚ್.ಡಿ. ಪಾರ್ಶ್ವನಾಥ, ಎ.ವಿ.ಕಾಂತಮ್ಮ ಕಾಲೇಜಿನ ಪ್ರಾಂಶುಪಾಲ ಸೀ.ಚ.ಯತೀಶ್ವರ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡ ಡಿಸಿ ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಲತಾಕುಮಾರಿ ತಾವು ಓದುತ್ತಿದ್ದ ಪುಸ್ತಕಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ತಿಳಿಸಿದರು. ವಿವೇಕಾನಂದ ಸುಭಾಷ್‌ಚಂದ್ರ ಬೋಸ್ ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ಬಸವಣ್ಣ ಅಂಬೇಡ್ಕರ್ ಅವರ ಚಿಂತನೆಗಳ ಕುರಿತಾದ ಪುಸ್ತಕಗಳು ಅದರಲ್ಲೂ ಕನ್ನಡ ಸಾಹಿತ್ಯದ ಮೆರುಗನ್ನು ಹೆಚ್ಚಿಸಿದ ಕುವೆಂಪು ದ.ರಾ ಬೇಂದ್ರೆ ಶಿವರಾಮ ಕಾರಂತ ಗಿರೀಶ್ ಕಾರ್ನಾಡ್ ಅವರ ಸಮಗ್ರ ಪುಸ್ತಕಗಳನ್ನು ಓದುತ್ತಿದ್ದೆ. ಅದರಲ್ಲೂ ಮಹಿಳಾಪರ ವಾದ ಮಂಡಿಸುವಂತಹ ವೈದೇಹಿ ನೇಮಿಚಂದ್ರ ಅವರಂತಹ ಲೇಖಕರ ಪುಸ್ತಕವನ್ನು ಹೆಚ್ಚು ಓದುತ್ತಿದ್ದೆ ಎಂದು ತಮ್ಮ ವಿದ್ಯಾರ್ಥಿ ಜೀವನದ ಕುರಿತು ಅನುಭವಗಳನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.