ಹೊಳೆನರಸೀಪುರ: ‘ನಮ್ಮ ತಾಯಿ ಕಷ್ಟದ ದಿನಗಳನ್ನು ಪರಿಹರಿಸುವಂತೆ ಹರದನಹಳ್ಳಿ ಆಂಜನೇಯನಲ್ಲಿ ಮೊರೆ ಹೋಗಿದ್ದರು. ಅವರ ಕಷ್ಟದ ದಿನಗಳನ್ನು ಕಂಡಿದ್ದ ನನಗೂ ನೋವಾಗುತ್ತಿತ್ತು. ನಾನೂ ನಮ್ಮ ಕಷ್ಟಗಳನ್ನು ಕಳೆಯಪ್ಪ ಎಂದು ಪ್ರಾರ್ಥಿಸುತ್ತಿದ್ದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಮ್ಮ ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟರು.
ತಾಲ್ಲೂಕಿನ ಹರದನಹಳ್ಳಿ ಈಶ್ವರ ದೇವಾಲಯದ ಆವರಣದಲ್ಲಿ ಆಂಜನೇಯ ಸ್ವಾಮಿ ಮತ್ತುಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬಹಳ ನೋವು ಅನುಭವಿಸಿದರು. ಶೃಂಗೇರಿ ಶ್ರೀಗಳ ಆಶೀರ್ವಾದದಿಂದ ಉತ್ತಮ ಆಡಳಿತ ನೀಡಿದರು. ಹರದನಹಳ್ಳಿ, ಮುತ್ತಿಗೆ ಹಿರೇಹಳ್ಳಿ ಮತ್ತು ಪಡುವಲಹಿಪ್ಪೆಯ ದೇವಾಲಯಗಳನ್ನು ಶಾಸಕ ರೇವಣ್ಣ ಅತ್ಯಂತ ಶ್ರದ್ಧಾ ಭಕ್ತಿಯಿಂದ ಜೀರ್ಣೋದ್ಧಾರಗೊಳಿಸಿ ಲೋಕ ಕಲ್ಯಾಣ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ‘ಸನಾತನ ಧರ್ಮವು ಅನಾಧಿ ಕಾಲದಿಂದಲ್ಲೂ ಆಚರಣೆಯಲ್ಲಿ ಇದ್ದು, ಸನಾತನ ಧರ್ಮಕ್ಕೆ ಅಂತ್ಯವಿಲ್ಲ. ಧರ್ಮವು ಯಾವಾಗ ಪ್ರಾರಂಭವಾಯಿತು ಎಂದು ಯಾರಿಗೂ ತಿಳಿದಿಲ್ಲ ಆದ್ದರಿಂದ ಶಾಶ್ವತವಾಗಿದೆ. ಭಗವದ್ಗೀತೆಯಲ್ಲಿ ಈ ಬಗ್ಗೆ ಸಾಕಷ್ಟು ಉಲ್ಲೇಖವಿದೆ‘ ಎಂದು ತಿಳಿಸಿದರು.
ಇದಕ್ಕೂ ಮುನ್ನ ಪಡವಲಹಿಪ್ಪೆ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಚೆನ್ನಮ್ಮ ದೇವೇಗೌಡ ಶಾಸಕ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ವಿಲಾಸ್ ಸೆಪಟ್, ಉಪವಿಭಾಗಧಿಕಾರಿ ನವೀನ್ ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.