
ಹಾಸನ: ‘ನನಗೆ ಮತ್ತೆ ಮುಖ್ಯಮಂತ್ರಿ ಆಗಬೇಕು, ಮತ್ತೊಂದು ಆಗಬೇಕೆಂಬ ಬಯಕೆ ಇಲ್ಲ. ಆದರೆ, ನನ್ನ ಮೇಲೆ ವಿಶ್ವಾಸವಿಟ್ಟು ಬರುವ ಬಡವರಿಗೆ ಶಕ್ತಿ ತುಂಬಲು ಸಾಧ್ಯವೇ ಎನ್ನುವುದು ನನ್ನ ಚಿಂತೆ. ಕಡೆಯ ಬಾರಿ ರಾಜ್ಯದ ಜನ ಒಂದು ಅವಕಾಶ ಕೊಡಲಿ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಗವಂತ ನನಗೆ 5ನೇ ಬಾರಿಗೆ ಜೀವನ ನೀಡಿದ್ದಾನೆ. ಕೇಂದ್ರದ ಆರ್ಥಿಕ ನೆರವು ಬೇಕಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಅನುಭವವಿದೆ. ಖಜಾನೆ ಖಾಲಿ ಮಾಡುವುದು ಬೇಕಾಗಿಲ್ಲ. ಅಭಿವೃದ್ಧಿ ಮಾಡಬಹುದು’ ಎಂದರು.
‘ದೇವರು ನನಗೆ ಎಲ್ಲವನ್ನು ಕೊಟ್ಟಿದ್ದಾನೆ. ಆದರೆ, ನನ್ನ ಪರಿಸ್ಥಿತಿ ಹೇಗಿದೆ ಎಂದರೆ ಯಾರ ಕೈಗೂ ಸಿಗದೇ ಅರಣ್ಯಕ್ಕೆ ಹೋಗಿ ಗುಪ್ತವಾಗಿರಬೇಕು ಎನಿಸಿದೆ. ಸಂಪತ್ತಿದೆ, ಎಲ್ಲವೂ ಇದೆ. ಅದನ್ನು ತೆಗೆದುಕೊಂಡು ಏನು ಮಾಡೋಣ? ನಿದ್ರೆ ಮಾಡುವುದಕ್ಕೂ ಅಗುವುದಿಲ್ಲ’ ಎಂದು ಹೇಳಿದರು.
‘ಸಿ.ಎಂ ಆಗಬೇಕು ಅಂತಿದ್ದಾನಲ್ಲ ನಿಮ್ಮ ಲೀಡರ್, ಅವನು ನಿದ್ದೆ ಮಾಡ್ತಾನಾ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
‘ನರೇಗಾ ಯೋಜನೆ ಹೆಸರು ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಇದೇ ಮಹಾತ್ಮಗಾಂಧಿ ಹೆಸರಿನಲ್ಲಿ ಎಷ್ಟು ಕೋಟಿ ಮಾಡಿದ್ದೀರಿ?’ ಎಂದು ಕಾಂಗ್ರೆಸ್ನವರನ್ನು ಪ್ರಶ್ನಿಸಿದರು.
‘ನನ್ನಲ್ಲಿ ಸಣ್ಣತನವಿಲ್ಲ. ಮುಕ್ತ ತೀರ್ಮಾನಕ್ಕಾಗಿ ಬಿಜೆಪಿ ಜೊತೆ ಸಂಬಂಧ ಬೆಳೆಸಿದ್ದೇವೆ. ಕಾಂಗ್ರೆಸ್ ನೋಡಿ ಆಗಿದೆ. ರಾಜಕೀಯವಾಗಿ ದೇವೇಗೌಡರ ಜೀವನ ಹಾಳಾಗಲು ಕಾರಣ ಇದೇ ಕಾಂಗ್ರೆಸ್’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.