ಹಾಸನ: ‘ರೋಗಿಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುವುದು’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ನೂತನ ಅಧ್ಯಕ್ಷ ಡಾ.ಬಿ.ಜಿ. ವಾಗೀಶ್ ಹೇಳಿದರು.
‘ಎಲ್ಲಕ್ಕಿಂತ ಮುಖ್ಯವಾಗಿ ಪ್ರಥಮ ಚಿಕಿತ್ಸೆ ಬಗ್ಗೆ ಅರಿವಿರುವ ಪಡೆ ತಯಾರು ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ಕಾರ್ಯಾಗಾರ ಮಾಡುವ ಆಲೋಚನೆ ಇದೆ. ಗ್ರಾಮೀಣ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿ, ವೈದ್ಯರು ಒಂದು ತಂಡವಾಗಿ ಸಮಾಜ ಮುಖಿ ಕೆಲಸ ಮಾಡಲು ಸಂಕಲ್ಪ ಮಾಡಿದ್ದೇವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚೆಗೆ ಹಲವು ರೀತಿಯ ಕ್ಯಾನ್ಸರ್ ಮನುಷ್ಯರನ್ನು ಬಾಧಿಸುತ್ತಿವೆ. ಎಷ್ಟೋ ಮಂದಿಯಲ್ಲಿ ಇದು ಗಂಭೀರ ಸ್ಥಿತಿ ತಲುಪುವವರೆಗೂ ಗೊತ್ತಾಗುವುದೇ ಇಲ್ಲ. ಇಂಥವರಿಗೆ ತುರ್ತು ಅಗತ್ಯವಿರುವ ಅರಿವು ಮೂಡಿಸುವ ಕೆಲಸ ಮಾಡಲಾಗುವುದು. ಪ್ರಸ್ತುತ ರೋಗಿಗಳ ಪ್ರಮಾಣಕ್ಕೆ ತಕ್ಕಂತೆ ವೈದ್ಯರ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಆದರೂ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರಕುವ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳಾಗಬೇಕೋ ಅದನ್ನು ನಮ್ಮ ತಂಡ ಮಾಡಲಿದೆ ಎಂದರು.
ನಕಲಿ ವೈದ್ಯರ ತಡೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಸಂಘ ಸಹಕಾರ ನೀಡಲಿದೆ. ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡಲಿದ್ದೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
2021-22ನೇ ಸಾಲಿನ ಐಎಂಎ ಜಿಲ್ಲಾ ಶಾಖೆ ಅಧ್ಯಕ್ಷರಾಗಿ ಡಾ.ವಾಗೀಶ್ ಬಿ.ಜಿ., ಡಾ.ತೇಜಸ್ವಿ (ಕಾರ್ಯದರ್ಶಿ), ಡಾ.ಚಂದನ್ (ಖಜಾಂಚಿ) ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.