ADVERTISEMENT

ಹೇಮಾವತಿ ನದಿಯ ಪ್ರವಾಹಕ್ಕೆ ನಲುಗಿದ ಹಾಸನ ಜಿಲ್ಲೆ: ಆಡಳಿತದ ಅವ್ಯವಸ್ಥೆ ಬಯಲು

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 7:58 IST
Last Updated 29 ಜುಲೈ 2024, 7:58 IST
ಹೆತ್ತೂರು ಸಮೀಪದ ಐಗೂರು ಹೊಳೆ ತುಂಬಿ ಬತ್ತದ ಗದ್ದೆ ಮೇಲೆ ಹರಿಯುತ್ತಿದೆ
ಹೆತ್ತೂರು ಸಮೀಪದ ಐಗೂರು ಹೊಳೆ ತುಂಬಿ ಬತ್ತದ ಗದ್ದೆ ಮೇಲೆ ಹರಿಯುತ್ತಿದೆ   

ಹಾಸನ: ಜಿಲ್ಲೆಯಲ್ಲಿ 15 ದಿನಗಳ ಕಾಲ ಸುರಿದ ಮಳೆ, ಆಡಳಿತದ ಅವ್ಯವಸ್ಥೆಯನ್ನು ಬಯಲು ಮಾಡಿದೆ. ಎಲ್ಲಿ ನೋಡಿದರೂ ನೀರು, ಭೂಕುಸಿತ, ಮನೆಗಳ ಹಾನಿ, ಬೆಳೆದು ನಿಂತು ಪೈರು ಜಲಾವೃತ ಹೀಗೆ... ಸಂಪೂರ್ಣ ಜನಜೀವನವನ್ನೇ ಸ್ತಬ್ಧಗೊಳಿಸಿದೆ. ವರುಣನ ಆರ್ಭಟಕ್ಕೆ ಮಲೆನಾಡು ನಲುಗಿದ್ದರೆ, ಹೇಮೆಯ ಪ್ರವಾಹಕ್ಕೆ ಅರೆ ಮಲೆನಾಡು, ಬಯಲು ಸೀಮೆ ಪ್ರದೇಶಗಳೂ ಹಾನಿ ಅನುಭವಿಸುವಂತಾಗಿವೆ.

ಸಕಲೇಶಪುರ, ಆಲೂರು, ಬೇಲೂರು, ಹಾಸನ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟದಿಂದ ಹೆಚ್ಚಿನ ಅನಾಹುತ ಸಂಭವಿಸಿದೆ. ಸಕಲೇಶಪುರ ತಾಲ್ಲೂಕಿನಲ್ಲಂತೂ ಭೂಕುಸಿತದ ಆತಂಕ ಮತ್ತಷ್ಟು ಹೆಚ್ಚಾಗುತ್ತಲೇ ಇದೆ. ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಸಂಚರಿಸುವುದೇ ದುಸ್ತರ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಕೃತಿಯ ಮುನಿಸೋ, ಸ್ವಯಂಕೃತ ಅಪರಾಧವೋ: ಮಲೆನಾಡು ಭಾಗವಾದ ಸಕಲೇಶಪುರ, ಆಲೂರು ತಾಲ್ಲೂಕುಗಳಲ್ಲಿ ಭೂಕುಸಿತದ ಭೀತಿ ಹೆಚ್ಚುತ್ತಲೇ ಇದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಈ ತಾಲ್ಲೂಕುಗಳಲ್ಲಿ ಪ್ರಕೃತಿಯ ಮುನಿಸಿನ ಜೊತೆಗೆ ಸ್ವಯಂಕೃತ ಅಪರಾಧವೂ ಭೂಕುಸಿತಕ್ಕೆ ಕಾರಣವಾಗುತ್ತಿದೆ ಎನ್ನುವುದು ಮಲೆನಾಡಿನ ಜನರ ಆರೋಪ.

ADVERTISEMENT

ಹೆದ್ದಾರಿ ಕಾಮಗಾರಿ ಆರಂಭಿಸುವ ಮೊದಲು, ಹೆದ್ದಾರಿಯ ಬದಿಯಲ್ಲಿ ಭೂಕುಸಿತದ ಆತಂಕ ಇರಲಿಲ್ಲ. ಯಾವಾಗ ಹೆದ್ದಾರಿ ವಿಸ್ತರಣೆ ಕಾಮಗಾರಿ ಆರಂಭವಾಯಿತೋ, ಭೂಕುಸಿತದ ಘಟನೆಗಳೂ ಶುರುವಾದವು. ಮೊದಲು ದೋಣಿಗಾಲ್‌ನಲ್ಲಿ ಆರಂಭವಾದ ಭೂಕುಸಿತ ಈಗ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆಗೆ ಸ್ಥಳಾಂತರವಾಗಿದೆ.

ಎತ್ತರಕ್ಕೆ ಕತ್ತರಿಸಿರುವ ಗುಡ್ಡಗಳ ಮೇಲಿಂದ ಮಳೆ ನೀರು ನಿರಂತರವಾಗಿ ಹರಿಯುತ್ತದೆ. ಮಳೆಯ ರಭಸಕ್ಕೆ ನೀರಿನ ಜೊತೆಗೆ ಮಣ್ಣೂ ಕುಸಿದು ಕೆಳಗೆ ಬೀಳುತ್ತಿದೆ. ಸಮರ್ಪಕ ತಡೆಗೋಡೆಗಳ ನಿರ್ಮಾಣ ಮಾಡದೇ ಇರುವುದು ಈ ಭೂಕುಸಿತಕ್ಕೆ ಕಾರಣ ಎನ್ನುವುದು ಸ್ಥಳೀಯರ ಆರೋಪ.

ಹಾಸನದಿಂದ ಸಕಲೇಶಪುರದವರೆಗಿನ ಕಾಮಗಾರಿಯಲ್ಲಿ ಅಷ್ಟೊಂದು ಭೂಕುಸಿತ ಆಗಿಲ್ಲ. ಆದರೆ, ಹೆದ್ದಾರಿಯ ತಡೆಗೋಡೆಗಳೇ ಕುಸಿದಿವೆ. ಆದರೆ, ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆಯಲ್ಲಿ ಮಾತ್ರ ಭೂಕುಸಿತದ ಪ್ರಮಾಣ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಗುಡ್ಡಗಳನ್ನೇ ಕತ್ತರಿಸಿ, ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ಭೂಕುಸಿತದ ಆತಂಕ ನಿರಂತರವಾಗಿದೆ.

ಮೇಲಿನಿಂದ ಬೀಳುವ ಮಣ್ಣು ರಸ್ತೆಯನ್ನಷ್ಟೇ ಆಕ್ರಮಿಸಿಕೊಳ್ಳುತ್ತಿಲ್ಲ. ಅಕ್ಕಪಕ್ಕದ ಗದ್ದೆಗಳ ಮೇಲೂ ಮಣ್ಣಿನ ರಾಶಿ ಬೀಳುತ್ತಿದ್ದು, ಬೆಳೆದ ಬೆಳೆಗಳೆಲ್ಲ ಮಣ್ಣು ಪಾಲಾಗುತ್ತಿವೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಸ್ಥಿತಿ ರೈತರದ್ದಾಗಿದೆ.

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಸಂತೋಷ್ ಸಿ.ಬಿ., ಜಾನೇಕೆರೆ ಆರ್‌. ಪರಮೇಶ್, ಎಚ್‌.ವಿ. ಸುರೇಶ್‌ಕುಮಾರ್‌, ಜಗದೀಶ್ ಆರ್‌. ಹೊರಟ್ಟಿ

ಸಕಲೇಶಪುರ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಣಗೂರು–ಜನ್ನಾಪುರ ರಾಜ್ಯ ಹೆದ್ದಾರಿ ಬಾಗರಹಳ್ಳಿ ಬಳಿ ಭೂಮಿ ಕುಸಿದು ಬಿದ್ದಿರುವುದು –ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್‌. ಪರಮೇಶ್‌.
ಕಂಗೆಟ್ಟ ಕೃಷಿಕರು
ಕಳೆದ ಬಾರಿ ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ರೈತರು ಈ ಬಾರಿ ಅತಿವೃಷ್ಟಿಯಿಂದ ಕಂಗೆಟ್ಟಿದ್ದಾರೆ. ಮುಸುಕಿನ ಜೋಳ ಭತ್ತ ಶುಂಠಿ ಹತ್ತಿ ವಾಣಿಜ್ಯ ಬೆಳೆಯಾದ ತಂಬಾಕು ಎಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ. ಈ ಬಾರಿ ಬಹಳಷ್ಟು ರೈತರು ಶುಂಠಿ ಬೆಳೆದಿದ್ದಾರೆ. ಆದರೆ ಅತಿಯಾದ ಮಳೆಯಿಂದ ಶುಂಠಿಗೆ ಕೊಳೆರೋಗದ ಬಾಧೆ ಶುರುವಾಗಿದೆ. ಬಿತ್ತಿದ ಬೆಳೆಗಳು ಮೇಲೇಳದೇ ಉತ್ಪಾದನೆಯೂ ಕುಂಠಿತವಾಗುವ ಆತಂಕ ಎದುರಾಗಿದೆ. ಇತ್ತ ಮಲೆನಾಡು ಭಾಗದಲ್ಲಿ ಕಾಫಿ ಕಾಳುಮೆಣಸು ಏಲಕ್ಕಿ ಬೆಳೆಗಳಿಗೂ ಮಳೆ ಸಂಕಷ್ಟ ತಂದೊ‌ಡ್ಡಿದ್ದು ಈ ಬಾರಿ ಉತ್ಪಾದನೆ ಶೇ 50ಕ್ಕಿಂತ ಹೆಚ್ಚು ಕಡಿಮೆಯಾಗಲಿದೆ ಎನ್ನುತ್ತಿದ್ದಾರೆ ಬೆಳೆಗಾರರು.
ಕುಸಿದ ಉತ್ಪಾದನೆ
ಮಳೆಯಿಂದಾಗಿ ಬೆಳೆ ಪ್ರತಿ ವರ್ಷದಂತೆ ಬೆಳವಣಿಗೆಯೂ ಆಗದೇ ಉತ್ಪಾದನೆ ಕುಸಿದಿದೆ. ಧಾವಂತದಲ್ಲಿ ಕೃಷಿ ಚಟುವಟಿಕೆ ಮಾಡಿದ್ದು ಕೂಲಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಸೀಬಳ್ಳಿ ಯೋಗಣ್ಣ ರೈತ ಸಂಘದ ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಬಾಡಿಗೆ ಇಲ್ಲದೇ ಪರದಾಟ ಸಕಲೇಶಪುರ ತಾಲ್ಲೂಕಿನಲ್ಲಿ ತಿಂಗಳಿಂದ ಪ್ರವಾಸಿಗರೇ ಬರುತ್ತಿಲ್ಲ. ಕಾರುಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಜೀವನಕ್ಕೆ ಇದೇ ಕಸುಬನ್ನು ನಂಬಿಕೊಂಡಿದ್ದು ಜೀವನ ನಿರ್ವಹಣೆ ಮಾಡುವುದೂ ದುಸ್ತರವಾಗಿದೆ. ರಮೇಶ್‌ ಕಾರು ಮಾಲೀಕರ–ಚಾಲಕರ ಸಂಘದ ಮಾಜಿ ಅಧ್ಯಕ್ಷ ಶಿರಾಡಿ ಘಾಟ್ ಬಂದ್ ಮಾಡಲ್ಲ ಶಿರಾಡಿ ಘಾಟ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲು ಆಗಲ್ಲ. ವಾಹನಗಳು ಜನರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಕೆ.ಎನ್‌. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ ಮನೆ ಹಾನಿಗೆ ಪರಿಹಾರ ಜಿಲ್ಲೆಯಲ್ಲಿ ಒಟ್ಟು 25 ಮನೆಗಳಿಗೆ ಹಾನಿಯಾಗಿದ್ದು ಉಳಿದಂತೆ 135 ಮನೆಗಳು ಅಲ್ಪಸ್ವಲ್ಪ ಹಾನಿಯಾಗಿವೆ. ಸೂಕ್ತ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಿ.ಸತ್ಯಭಾಮಾ ಜಿಲ್ಲಾಧಿಕಾರಿ ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತ ಸಕಲೇಶಪುರ ತಾಲ್ಲೂಕಿನಲ್ಲಿ ಆಗುತ್ತಿರುವ ಭೂಕುಸಿತ ನೈಸರ್ಗಿಕ ವಿಕೋಪದಿಂದಲ್ಲ. ಬದಲಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯೇ ಕಾರಣ. ಸಿಮೆಂಟ್ ಮಂಜು ಶಾಸಕ ಶಾಶ್ವತ ಪರಿಹಾರಕ್ಕೆ ಕ್ರಮ ನದಿ ಪಾತ್ರದಲ್ಲಿ ವಾಸ ಮಾಡುವ ಜನರಿಗೆ ಬೇರೆ ಬಡಾವಣೆ ನಿರ್ಮಿಸಿ ಕೊಡಬೇಕು. ಈ ಬಗ್ಗೆ ನಾನೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಶ್ರೇಯಸ್‌ ಪಟೇಲ್‌ ಸಂಸದ
ಪಟ್ಟಣಗಳೂ ಜಲಾವೃತ
ಹೇಮಾವತಿ ನದಿಯ ಒಳಹರಿವು ಏರಿಕೆಯಾದ ಹಿನ್ನೆಲೆಯಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವೂ ಹೆಚ್ಚಾಗಿತ್ತು. ಹೀಗಾಗಿ ತಾಲ್ಲೂಕು ಕೇಂದ್ರಗಳಾದ ಹೊಳೆನರಸೀಪುರ ಸಕಲೇಶಪುರ ಕೂಡ ಜಲಾವೃತಗೊಂಡಿದ್ದವು. ಹೊಳೆನರಸೀಪುರದ ಪ್ರಮುಖ ರಸ್ತೆಗಳೇ ಹೊಳೆಯಂತಾಗಿದ್ದವು. ಇನ್ನೊಂದೆಡೆ ಪ್ರಮುಖ ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ ಜನರೂ ತೊಂದರೆ ಅನುಭವಿಸುವಂತಾಯಿತು. ಹೊಳೆನರಸೀಪುರದ ಕುವೆಂಪು ಬಡಾವಣೆ ಸಕಲೇಶಪುರದ ಆಜಾದ್ ರಸ್ತೆಗಳಲ್ಲಿ ನೀರು ನಿಂತು ಅಕ್ಷರಶಃ ನಡುಗಡೆಗಳಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.