ಹೆತ್ತೂರು: ಹೋಬಳಿಯ ವನಗೂರು ಗ್ರಾಮದ ಮನೆಯ ಒಳಗೆ ಜೋಕಾಲಿ ಆಡಲು ಸೀರೆ ಕುತ್ತಿಗೆಗೆ ಬಿಗಿದು, ಬಾಲಕಿ ಸಾನಿತಾ (9) ಮೃತಪಟ್ಟಿದ್ದಾಳೆ.
ಬಸವರಾಜು- ಬೇಬಿ ದಂಪತಿಯ ಒಬ್ಬಳೇ ಪುತ್ರಿ ಸಾನಿತಾ ನಾಲ್ಕನೇ ತರಗತಿ ಓದುತ್ತಿದ್ದು, ಶನಿವಾರ ರಜೆಯಿದ್ದ ಕಾರಣ ಮನೆಯೊಳಗೆ ಸೀರೆ ಕಟ್ಟಿಕೊಂಡು ಜೋಕಾಲಿ ಆಡುತ್ತಿದ್ದಳು. ಈ ವೇಳೆ ಆಯತಪ್ಪಿ ಕುತ್ತಿಗಿಗೆ ಸೀರೆ ಬಿಗಿದು ಮೃತಪಟ್ಟಿದ್ದಾಳೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಳ್ಳಕ್ಕೆ ಬಿದ್ದ ಕಾರು
ಹೆತ್ತೂರು: ಸಮೀಪದ ಅತ್ತಿಹಳ್ಳಿಯಲ್ಲಿ ಸೇತುವೆಯ ಒಂದು ಬದಿ ತಡೆಗೋಡೆ ಇಲ್ಲದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಬಿದ್ದಿದೆ.
ಹೋಬಳಿಯ ಬಾಚಿಹಳ್ಳಿ ಮತ್ತು ಅತ್ತಿಹಳ್ಳಿ ರಸ್ತೆ ಇತ್ತೀಚೆಗಷ್ಟೆ ಡಾಂಬರೀಕರಣ ಆಗಿದ್ದು, ಕಿರಿದಾದ ಸೇತುವೆ ವಿಸ್ತರಣೆ ಮಾಡಿಲ್ಲ. ಸೇತುವೆಯ ಒಂದು ಭಾಗದ ತಡೆಗೋಡೆ ಮುರಿದು ಹೋಗಿದ್ದು, ಇದರಿಂದ ಪ್ರವಾಸಿಗರ ಇನ್ನೊವಾ ಕಾರೊಂದು ಪ್ರಪಾತಕ್ಕೆ ಬಿದ್ದಿದೆ.
ಸೇತುವೆ ಕಿರಿದಾಗಿದ್ದರಿಂದ ಅಪಘಾತಗಳು ಹೆಚ್ಚಾಗಿದ್ದು, ಒಂದೇ ವಾರದಲ್ಲಿ 4 ಕಾರುಗಳು ಸೇತುವೆಯಿಂದ ಕೆಳಗೆ ಬಿದ್ದಿವೆ. ಪ್ರಾಣಾಪಾಯ ಸಂಭವಿಸಿಲ್ಲ. ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಅಪಘಾತಗಳು ಹೆಚ್ಚಾಗಿವೆ.
‘ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಈ ಸೇತುವೆಯ ತಡೆಗೋಡೆ ದುರಸ್ತಿ ಮಾಡಬೇಕು. ಇಂತಹ ಅಪಘಾತಗಳು ಸಂಭವಿಸುವುದನ್ನು ತಡೆಗಟ್ಟಬಹುದು’ ಎಂದು ಬಾಚಿಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.