ADVERTISEMENT

ಹೆತ್ತೂರು: ಮಲೆನಾಡಿನ ಪರಿಸರದಲ್ಲಿ ಸ್ವಚ್ಛತೆಯ ಪಾಠ

ಕಸ ಬಿಸಾಕುವ ಪ್ರವಾಸಿಗರ ಬಗ್ಗೆ ಆಕ್ರೋಶ: ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:10 IST
Last Updated 19 ಫೆಬ್ರುವರಿ 2026, 6:10 IST
ವನಗೂರು ಕೂಡುರಸ್ತೆ ವೃತ್ತದಲ್ಲಿ ಸಕಲೇಶಪುರ ತಾಲ್ಲೂಕು ಹೋಂ ಸ್ಟೇ ಮಾಲೀಕರು ಮತ್ತು ಸಿಬ್ಬಂದಿ ವರ್ಗದಿಂದ ಪ್ಲಾಸ್ಟಿಕ್ ಕಸ ಸಂಗ್ರಹಣೆ ಮಾಡಲಾಯಿತು.
ವನಗೂರು ಕೂಡುರಸ್ತೆ ವೃತ್ತದಲ್ಲಿ ಸಕಲೇಶಪುರ ತಾಲ್ಲೂಕು ಹೋಂ ಸ್ಟೇ ಮಾಲೀಕರು ಮತ್ತು ಸಿಬ್ಬಂದಿ ವರ್ಗದಿಂದ ಪ್ಲಾಸ್ಟಿಕ್ ಕಸ ಸಂಗ್ರಹಣೆ ಮಾಡಲಾಯಿತು.   

ಹೆತ್ತೂರು: ಪಶ್ಚಿಮಘಟ್ಟ ವ್ಯಾಪ್ತಿಯ ವನಗೂರು ಕೂಡುರಸ್ತೆ ಗ್ರಾಮದಲ್ಲಿ ಸಕಲೇಶಪುರ ತಾಲ್ಲೂಕು. ಮಲ್ನಾಡು ಹೋಂ ಸ್ಟೇ ಮಾಲೀಕರ ಸಂಘ, ಸ್ಥಳೀಯ ಪೊಲೀಸರು, ವನಗೂರು ಗ್ರಾಮ ಪಂಚಾಯಿತಿ ವತಿಯಿಂದ ಪರಿಸರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಸಕಲೇಶಪುರ ಹೋಂ ಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾಲ್ಮನೆ, ಅತ್ಯುನ್ನತ ಪರಿಸರ ಸೊಬಗು ಹೊಂದಿರುವ ತಾಲ್ಲೂಕಿನ ಹೆತ್ತೂರು ಹೋಬಳಿಯ ಬಿಸಿಲೆ, ಮೂಕನ ಮನೆ ಜಲಪಾತ, ಪಟ್ಲಬೆಟ್ಟ, ಗವಿಬೆಟ್ಟ, ಕಾಗಿನೆರೆ ಸುತ್ತಮುತ್ತ ಸಾವಿರಾರು ಪ್ರವಾಸಿಗರು ಪ್ರಕೃತಿ ಸವಿಯಲು ಬರುತ್ತಾರೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮದ್ಯದ ಬಾಟಲಿಗಳನ್ನು ಬಿಸಾಕುತ್ತಿರುವುದು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ. ಈ ಬಗ್ಗೆ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪಶ್ಚಿಮ ಘಟ್ಟ ಪ್ರಪಂಚದ ಆಮ್ಲಜನಕ ಬ್ಯಾಂಕ್ ಎಂದು ಪ್ರಖ್ಯಾತಿ ಪಡೆದಿದೆ. ಅವು ಕೇವಲ ಬೆಟ್ಟಗಳಲ್ಲ, ಅವು ನಮ್ಮ ಉಸಿರು. ನಮ್ಮ ನೀರು. ನಮ್ಮ ಬದುಕಿನ ನಾಡಿ. ಸ್ವಚ್ಛ ಪರಿಸರವು ಆರೋಗ್ಯಕರ ಸಮಾಜದ ಮೂಲಸ್ತಂಭ. ಇಂಥ ಅದ್ಭುತ ಸ್ವರ್ಗದ ಮಡಿಲಿನಲ್ಲಿ ಬದುಕುತ್ತಿರುವುದು ನಮ್ಮ ಅದೃಷ್ಟ. ಅದನ್ನು ಉಳಿಸುವುದು ನಮ್ಮ ಕರ್ತವ್ಯ. ಪ್ರವಾಸಿ ತಾಣಗಳು ಕೇವಲ ಮನರಂಜನೆಗಾಗಿ ಇರುವ ಸ್ಥಳವಲ್ಲ. ಅವು ನಮ್ಮ ಆರ್ಥಿಕ ಮತ್ತು ಭವಿಷ್ಯದ ಆಧಾರ. ಒಂದು ನಿರ್ಲಕ್ಷ್ಯದ ಕಸದ ತುಂಡಿನಿಂದ ಪ್ರಕೃತಿಗೆ ಗಾಯವಾಗಬಹುದು ಎಂದು ತಿಳಿಸಿದರು.

ADVERTISEMENT

ಯಸಳೂರು ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸಲ್ಮಾನ್ ಖಾನ್ ತಂಬೂಳಿ ಮಾತನಾಡಿ, ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಬರುವುದರಿಂದ ಮುಂದಿನ ದಿನಗಳಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ಹೆಚ್ಚಿನ ಸಿಬ್ಬಂದಿ ನೇಮಿಸಲಾಗುವುದು. ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವನಗೂರು ಕೃಷಿ ಬ್ಯಾಂಕ್‌ ಅಧ್ಯಕ್ಷ ಕೌಶಿಕ್ ಗೊದ್ದು ಮಾತನಾಡಿ, ಪ್ರತಿ ವರ್ಷ ಹೊರ ಜಿಲ್ಲೆಯ ಧರ್ಮಸ್ಥಳ ಪಾದಯಾತ್ರಿಗಳು ಬಿಸಲೆ ಅರಣ್ಯದ ಮೂಲಕ ಸಂಚರಿಸುತ್ತಿದ್ದು, ಅರಣ್ಯ ಭಾಗದಲ್ಲಿ ಸಂಚರಿಸುವಾಗ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಿಸಾಕುತ್ತಾರೆ. ವನ್ಯಪ್ರಾಣಿಗಳ ಜೀವಕ್ಕೆ ಪ್ಲಾಸ್ಟಿಕ್‌ ಕಂಟಕವಾಗಿದ್ದು, ಮುಂದಿನ ಬಾರಿ ಈ ಭಾಗದಲ್ಲಿ ಯಾತ್ರಿಗಳು ಬರುವಾಗ, ಅವರನ್ನು ಕರೆದುಕೊಂಡು ಬರುವ ಏಜೆನ್ಸಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ಕೊಡಬೇಕು. ಒಂದು ವೇಳೆ ನಿಯಮ ಪಾಲಿಸದೆ ಇದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದು ತಿಳಿಸಿದರು.

ಹೋಂ ಸ್ಟೇ ಮಾಲೀಕರು, ಸಿಬ್ಬಂದಿ, ಕೂಡುರಸ್ತೆ ಗ್ರಾಮದಿಂದ ಬಿಸಿಲೆ ಗ್ರಾಮದವರೆಗೂ ಕಸವನ್ನು ಸಂಗ್ರಹಿಸಿದರು. ವನಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀರ್ ಹಿಜಿನಹಳ್ಳಿ, ಸದಸ್ಯ ಸತೀಶ್, ತಾಲ್ಲೂಕು ಹೋಂ ಸ್ಟೇ ಸಂಘದ ಕಾರ್ಯದರ್ಶಿ ಪ್ರಸನ್ನ, ಖಜಾಂಚಿ ವಿಕ್ಕಿ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲ್ಲೂಕು ಘಟಕದ ಉಪಾಧ್ಯಕ್ಷ ಮ್ಯಾಗಡಹಳ್ಳಿ ರಾಜು, ಕೃಷಿ ಬ್ಯಾಂಕಿನ ಸದಸ್ಯ ಕೆರಹಳ್ಳಿ ರಮೇಶ್, ವನಗೂರು ಗ್ರಾಮ ಪಂಚಾಯಿತಿ ಸಿಬ್ಬಂದಿ, ಸಾರ್ವಜನಿಕರು ಉಪಸಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.