ADVERTISEMENT

ಹಿರೀಸಾವೆ: ವಿಭಿನ್ನ ರೂಪಗಳಲ್ಲಿ ಗಣಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 2:08 IST
Last Updated 23 ಆಗಸ್ಟ್ 2025, 2:08 IST
   

ಹಿರೀಸಾವೆ: ಎರಡು ತಿಂಗಳಿನಿಂದ ಜೇಡಿ ಮಣ್ಣಿನಿಂದ ಗಣೇಶ ಮತ್ತು ಗೌರಿ ಮೂರ್ತಿಗಳನ್ನು ತಯಾರಿಸಿ, ಇದೀಗ ಕಲಾವಿದರ ಮನೆ ಮಂದಿಯೆಲ್ಲ ಬಣ್ಣ ಹಚ್ಚಿ, ಅಂತಿಮ ರೂಪ ನೀಡಿ, ಪ್ರತಿಷ್ಠಾಪನೆಗೆ ಮೂರ್ತಿಗಳನ್ನು ಸಿದ್ದಪಡಿಸುತ್ತಿದ್ದಾರೆ.

ಹಿರೀಸಾವೆಯಲ್ಲಿ ಎರಡು ಕುಟುಂಬದವರು ನೂರಾರು ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದಾರೆ. ಉಗ್ರನರಸಿಂಹ, ಶಿವ ಪಾರ್ವತಿಯ ನಡುವೆ ಗಣೇಶ, ಕೃಷ್ಣ, ವೆಂಕಟೇಶ್ವರಸ್ವಾಮಿ, ಲಕ್ಷ್ಮಿ ರೂಪದ ಮೂರ್ತಿಗಳು ಹಾಗೂ ನಂದಿ, ಸಿಂಹದ ಮೇಲಿನ ಗಣೇಶ ಸೇರಿದಂತೆ ವಿವಿಧ ದೇವರ ಜೊತೆ ಇರುವ ವಿಭಿನ್ನ ಮೂರ್ತಿಗಳು ನೋಡುಗರ ಗಮನ ಸೆಳೆಯುತ್ತವೆ.

ಹೋಬಳಿಯ ಕೆಲವು ಹಳ್ಳಿಗಳಲ್ಲಿ ಒಂದು ಅಥವಾ ಎರಡು ಕಡೆ ಕೂರಿಸಿದರೆ, ಹೋಬಳಿ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ADVERTISEMENT

‘ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸಂಘ– ಸಂಸ್ಥೆಯವರು ತಿಂಗಳ ಮೊದಲೇ ಮುಂಗಡ ಹಣ ನೀಡಿ ಬುಕಿಂಗ್ ಮಾಡಿದ್ದಾರೆ. ₹ 5 ಸಾವಿರದಿಂದ ₹ 35 ಸಾವಿರ ಬೆಲೆಯ ಮೂರ್ತಿಗಳನ್ನು ಮಾಡಲಾಗಿದೆ. ₹500 ಕ್ಕಿಂತ ಕಡಿಮೆ ಬೆಲೆಯ ಸಣ್ಣ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ’ ಎನ್ನುತ್ತಾರೆ ಹಿರೀಸಾವೆಯಲ್ಲಿ ಮೂರ್ತಿ ಮಾಡುತ್ತಿರುವ ನಾಗರಾಜು.

‘ಹಿರೀಸಾವೆ ಹೋಬಳಿಯಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿ, ಕೆರೆಗಳಲ್ಲಿ ನೀರು ಇರುವುದರಿಂದ, ತುಮಕೂರು ಜಿಲ್ಲೆ ತುರುವೇಕೆರೆ ಮತ್ತು ಚಿಕ್ಕನಾಯಕಹಳ್ಳಿ ತಾಲ್ಲೂಕುಗಳಿಂದ ಜೇಡಿ ಮಣ್ಣನ್ನು ತರಿಸಲಾಗಿದೆ. ಒಂದು ಟ್ರ್ಯಾಕ್ಟರ್ ಮಣ್ಣಿಗೆ ₹ 15 ಸಾವಿರ ಆಗಿದೆ. ಪ್ರತಿ ವರ್ಷವು ಬಣ್ಣದ ಬೆಲೆ ಜಾಸ್ತಿಯಾಗಿದೆ. ಆದರೆ ಮೂರ್ತಿ ಕೊಳ್ಳುವವರು ಕಡಿಮೆ ಬೆಲೆಗೆ ಕೇಳುತ್ತಾರೆ’ ಎನ್ನುವುದು ಮೂರ್ತಿ ತಯಾರಕ ಮೋಹನ್ ಅವರ ಮಾತು.

ಮನೆಯಲ್ಲಿ ಕೂರಿಸುವವರು ಮಾತ್ರ ಪರಿಸರ ಸ್ನೇಹಿ (ಬಣ್ಣ ರಹಿತ) ಸಣ್ಣ ಮೂರ್ತಿಗಳನ್ನು ಕೊಳ್ಳುತ್ತಾರೆ. ನೀರಿಗೆ ಬಿಟ್ಟರೂ ಯಾವುದೇ ಮಾಲಿನ್ಯವಾಗದ ಬಣ್ಣವನ್ನು ದೊಡ್ಡ ಮೂರ್ತಿಗಳಿಗೆ ಬಳಸಲಾಗಿದೆ ಎನ್ನುತ್ತಾರೆ ತಯಾರಕರು.

ವಿವಿಧ ಗೌರಿ, ಗಣೇಶ ಮೂರ್ತಿ ತಯಾರಿಸಿದ್ದೇವೆ. ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಮೂರ್ತಿ ಮಾರುಕಟ್ಟೆಗೆ ಬಂದಿವೆ. ಜನರು ಎಚ್ಚರ ವಹಿಸಿ, ಮಣ್ಣಿನ ಮೂರ್ತಿಗಳನ್ನೇ ಕೊಳ್ಳಬೇಕು.
ಮೋಹನ್, ಮೂರ್ತಿ ತಯಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.