
ಹೊಳೆನರಸೀಪುರ: ‘ಕಲ್ಲು ದೇವರಲ್ಲ ಎಂದು ಕೆಲವರು ಭಾವಿಸಿದ್ದಾರೆ, ಆದರೆ ಕಲ್ಲಿನ ಒಳಗೇ ದೇವರು ಅಡಗಿದ್ದಾನೆ’ ಎಂದು ಅರ್ಚಕ ಶಶಾಂಕ್ ಪುತ್ತೂರಾಯ ಅಭಿಪ್ರಾಯಪಟ್ಟರು.
ಇಲ್ಲಿನ ಅರಕಲಗೂಡು ರಸ್ತೆಯ ಹಾದಿ ಮಹದೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಿರುವ ನೂತನ ಮಾಹದೇಶ್ವರ, ಬಸವಣ್ಣ ಹಾಗೂ ಸ್ವಾಮಿಯ ಪಾದಗಳ ಕಲ್ಲಿನ ವಿಗ್ರಹಗಳಿಗೆ ಜಲಾಧಿವಾಸದಲ್ಲಿರಿಸುವ ಪೂಜಾ ವಿಧಾನ ಸಂದರ್ಭದಲ್ಲಿ ಮಾತನಾಡಿದರು.
‘ಕಲ್ಲಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇಸಿರಿ, ಪ್ರಾಣಪ್ರತಿಷ್ಠಾಪನೆ ಮಾಡಿದ ನಂತರ ಅದಕ್ಕೆ ದೈವತ್ವದ ಶಕ್ತಿ ಬರುತ್ತದೆ ಎಂದು ಭಾವಿಸಿ ಪೂಜಿಸುತ್ತಾರೆ. ಪೂಜೆ ಮಾಡಿ ಫಲ ಪಡೆದೆ ಎಂದು ಕೋಟಿ, ಕೋಟಿ ಜನರು ನಂಬಿದ್ದಾರೆ, ಆ ನಂಬಿಕೆ ನಿಜವೂ ಆಗಿದೆ’ ಎಂದರು.
‘ಈ ದೇವಾಲಯದಲ್ಲಿ ಹುಂಡಿ ಕದಿಯಲು ಬಂದ ಕಳ್ಳರು ವಿಗ್ರಹವನ್ನು ವಿರೂಪಗೊಳಿಸಿದ್ದರು. ಆ ವಿಗ್ರಹ ಪೂಜೆಗೆ ಯೋಗ್ಯವಲ್ಲ ಎನ್ನುವ ಕಾರಣಕ್ಕೆ ಸುತ್ತಮುತ್ತಲ ಭಕ್ತರ ಸಹಕಾರದಿಂದ ಹೊಸ ವಿಗ್ರಹಗಳನ್ನು ಮಾಡಿಸಲಾಗಿದೆ. ವಿಗ್ರಹಗಳ ಪ್ರತಿಷ್ಠಾಪನೆವರೆಗೆ ಜಲಾಧಿವಾಸದಲ್ಲಿ ಇರಿಸಬೇಕು’ ಎಂದರು.
ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಕಾರ್ಯದರ್ಶಿ ವೈ.ವಿ. ಚಂದ್ರಶೇಖರ್, ಎನ್.ಆರ್. ಪ್ರಸನ್ನಕುಮಾರ್, ತಾಲ್ಲೂಕು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿಗಾರರ ಸಂಘದ ಅಧ್ಯಕ್ಷ ಮುರಳೀಧರ ಗುಪ್ತ, ಶಂಕರನಾರಾಯಣ ಐತಾಳ್, ಎಚ್.ಎಸ್. ಮಂಜುನಾಥ್ ಗುಪ್ತ, ಲಕ್ಷ್ಮೀ ಗುಪ್ತ, ಕ.ಸಾ.ಪ. ಗೌರವ ಕಾರ್ಯದರ್ಶಿ ಮಂಜುನಾಥ್ ಗುಪ್ತ, ಕ.ಸಾ.ಪ. ತಾಲ್ಲೂಕು ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ, ವಿ. ಗೋವಿಂದರಾಜು, ಕಾದಲನ್ ಕೃಷ್ಣ, ಅವಿನಾಶ್, ರಾಮಕೃಷ್ಣ ಗುಪ್ತ, ನಾಗೇಂದ್ರ ಗುಪ್ತ, ವಿಗ್ರಹಗಳನ್ನು ಕೆತ್ತಿದ ಶಿಲ್ಪಿಗಳು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.