ಅರಸೀಕೆರೆ: ತಾಲ್ಲೂಕಿನ ಬಾಣಾವಾರ ಹೋಬಳಿಯ ಬೈರಾಂಬುದಿ ಗ್ರಾಮದ ಹೊಂಗ್ಯಮ್ಮ ದೇವಿ, ಮಲ್ಲಿಗೆಮ್ಮ ದೇವಿ ಉತ್ಸವ ಮೂರ್ತಿಗಳ ದೇವಾಲಯದ ಜೀರ್ಣೋದ್ಧಾರ ಹಾಗೂ ವಿಮಾನ ಗೋಪುರ ಕಳಶ ಪ್ರತಿಸ್ಥಾಪನಾ ಮಹೋತ್ಸವದ ವಾರ್ಷಿಕೋತ್ಸವ ಸಮಾರಂಭ ಶುಕ್ರವಾರ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.
ಬೈರಾಂಬುದಿ ಗ್ರಾಮ ಸೇರಿದಂತೆ 12 ಹಳ್ಳಿ ಹಾಗೂ ಅಪಾರ ಭಕ್ತ ಸಮೂಹ ಹೊಂದಿರುವ ಹೊಂಗ್ಯಮ್ಮ ದೇವಿ , ಮಲ್ಲಿಗಮ್ಮ ದೇವಿ, ಚೆಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರ ದೇವಾಲಯವು ಜೀರ್ಣೋದ್ದಾರ ಹಾಗೂ ವಿಮಾನ ಗೋಪುರ ಕಳಶ ಪ್ರತಿಸ್ಥಾಪನಾ ಮಹೋತ್ಸವವು ಜರುಗಿ ವರ್ಷ ಪೂರೈಸಿದ್ದು, ಇದರ ಅಂಗವಾಗಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.
ದೇವಾಲಯದಲ್ಲಿ ವಾಸ್ತು ಹೋಮ, ಗಣಪತಿ ಹೋಮ ಸೇರಿದಂತೆ ದೇವಿಯವರಿಗೆ ಸಹಸ್ರನಾಮ, ಕುಂಕುಮಾರ್ಚನೆ ನಡೆಯಿತು. ದೇವರಿಗೆ ವಿಶೇಷ ಪುಷ್ಪಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಕ್ಷೇತ್ರ ಪಾಲಕರಾದ ಶ್ರೀ ಚೆಲುವರಾಯ ಸ್ವಾಮಿ ಹಾಗೂ ದೂತರಾಯ ಸ್ವಾಮಿಯವರ ಉತ್ಸವವು ಅರೆ ವಾದ್ಯ ಸದ್ದಿನೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ದೇವಾಲಯದ ಸಮಿತಿಯವರು, ಬೈರಾಂಬುದಿ ಗ್ರಾಮದ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾಧಿಗಳು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.