ADVERTISEMENT

ಹೃದಯಾಘಾತ: ಸಿಆರ್‌ಪಿಎಫ್‌ ಯೋಧ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 15:49 IST
Last Updated 13 ಜೂನ್ 2020, 15:49 IST
ಹೇಮಂತ್‌ ಕುಮಾರ್
ಹೇಮಂತ್‌ ಕುಮಾರ್   

ಹಾಸನ: ಛತ್ತಿಸ್‌ಗಡದ ಸುಕ್ಮಾದಲ್ಲಿ ಕೆಎಸ್‌ಆರ್‌ಪಿ 150 ನೇ ಬೆಟಾಲಿಯನ್ ಕರ್ತವ್ಯ ನಿರ್ವಹಿಸುತ್ತಿದ್ದ ತಾಲ್ಲೂಕಿನ
ಈಚಲಹಳ್ಳಿ ಗ್ರಾಮದ ಯೋಧ ಹೇಮಂತ್‌ ಕುಮಾರ್ (42) ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದಾರೆ.

ಈಚಲಹಳ್ಳಿಯ ದಾಸೇಗೌಡರ ಮಗನಾದ ಹೇಮಂತ್‌ 20 ವರ್ಷಗಳಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ನಿವೃತ್ತಿಗೆ ಎಂಟು ತಿಂಗಳು ಬಾಕಿ ಇತ್ತು. ಎರಡು ತಿಂಗಳು ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ, ಅವರ ಅಕಾಲಿಕ ಸಾವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಪಾರ್ಥಿವ ಶರೀರವನ್ನು ರಾಯಪುರದಿಂದ ಬೆಂಗಳೂರುವರೆಗೂ ವಿಮಾನದಲ್ಲಿ ತಂದು, ಅಲ್ಲಿಂದ ಸೇನಾ ವಾಹನದಲ್ಲಿ ಈಚಲಹಳ್ಳಿಗೆ ರಾತ್ರಿ ತರಲಾಯಿತು. ಭಾನುವಾರ ಮಧ್ಯಾಹ್ನ 1 ಗಂಟೆಗೆ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಹೇಮಂತ್‌ ಅವರಿಗೆ ಪತ್ನಿ, 10 ವರ್ಷದ ಹೆಣ್ಣು ಮಗು, 7 ವರ್ಷದ ಗಂಡು ಮಗು ಇದೆ.

ADVERTISEMENT

ಈಚಲಹಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮಗನನ್ನ ಕಳೆದುಕೊಂಡ ದುಃಖದಲ್ಲಿದ್ದ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳನ್ನು ಗ್ರಾಮಸ್ಥರು ಸಮಾಧಾನ ಪಡಿಸುತ್ತಿದ್ದ ದೃಶ್ಯ ಕಂಡು ಬಂತು. ‘ಭಾರತಾಂಬೆಯ ಹೆಮ್ಮೆಯ ಪುತ್ರ, ನಮ್ಮೂರ ಹೊನ್ನ ಕಳಶ, ಮಣ್ಣಿನ ಮಗ ಅಜಾರಮರ’ ಎಂಬಸಂದೇಶದ ಕಟೌಟ್‌ ನಿಲ್ಲಿಸಿ ಗ್ರಾಮಸ್ಥರು ಗೌರವ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.