ಹಿರೀಸಾವೆ: ಗ್ರಾಮದಲ್ಲಿ ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ಪತಿ, ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ರೇಖಾ (36) ವರ್ಷ ಕೊಲೆಯಾದ ಮಹಿಳೆ. ಆಕೆಯ ಪತಿ ರಘು ಆರೋಪಿ. ಇಲ್ಲಿನ ಪಿಳ್ಳೆಶ್ವರ ಬಡಾವಣೆಯ ಮಹದೇವ ಎಂಬುವವರ ಮನೆಯಲ್ಲಿ ಎರಡು ವರ್ಷದಿಂದ ಬಾಡಿಗೆಗೆ ವಾಸ ಮಾಡುತ್ತಿದ್ದರು. ಶನಿವಾರ ರಾತ್ರಿ 8ಕ್ಕೆ ಪತಿ ರಘು ಕುಡಿದು ಬಂದು, ಹೆಂಡತಿಯೊಡನೆ ಜಗಳ ತೆಗೆದು, ಚಾಕುವಿನಿಂದ ಕೆನ್ನೆ, ಕುತ್ತಿಗೆ ಮತ್ತು ಎದೆ ಭಾಗಕ್ಕೆ ಚುಚ್ಚಿದ್ದಾನೆ.
ತೀವ್ರ ಗಾಯಗೊಂಡ ಮಹಿಳೆಯನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮತಪಟ್ಟಿದ್ದಾರೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕೆ ಎಸ್ಪಿ ಮೊಹಮ್ಮದ್ ಸುಜೀತಾ, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ, ಸೊಕೋ ತಂಡ ಭೇಟಿ ನೀಡಿದ್ದರು.
ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ ಹೋಬಳಿಯ ಹೊನ್ನಾದೇವಿಹಳ್ಳಿಯ ರೇಖಾ, ಸಕಲೇಶಪುರ ತಾಲ್ಲೂಕು ಹಾನಬಾಳ ರಘುನನ್ನು ಪ್ರೀತಿಸಿ 18 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇಬ್ಬರು ಗಂಡು ಮಕ್ಕಳಿದ್ದಾರೆ. ಆಗಾಗ ಗಂಡ– ಹೆಂಡತಿ ನಡುವೆ ಅನುಮಾನ ಮತ್ತು ಸಣ್ಣ ವಿಷಯಕ್ಕೆ ಜಗಳ ನಡೆಯುತ್ತಿತ್ತು.
ಕೊಲೆಯಾದ ಮಹಿಳೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದು, ರಘು ಪೇಂಟಿಂಗ್ ವೃತ್ತಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.