ADVERTISEMENT

ಅರಕಲಗೂಡು ಪ.ಪಂ: ರಾಜೀನಾಮೆ ಘೋಷಿಸಿದ ಅಧ್ಯಕ್ಷ ಹೂವಣ್ಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 5:19 IST
Last Updated 25 ಜನವರಿ 2022, 5:19 IST
ಅರಕಲಗೂಡಿನಲ್ಲಿ ಸೋಮವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಹೂವಣ್ಣ ರಾಜೀನಾಮೆ ಪತ್ರ ಪ್ರದರ್ಶಿಸಿದರು
ಅರಕಲಗೂಡಿನಲ್ಲಿ ಸೋಮವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಹೂವಣ್ಣ ರಾಜೀನಾಮೆ ಪತ್ರ ಪ್ರದರ್ಶಿಸಿದರು   

ಅರಕಲಗೂಡು: ‘ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದು ಅಧಿಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾಗಿ’ ಅಧ್ಯಕ್ಷ ಹೂವಣ್ಣ ತಿಳಿಸಿದರು.

ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಅಧ್ಯಕ್ಷರ ಚುನಾವಣೆ ವೇಳೆ ಅಧಿಕಾರ ಹಂಚಿಕೆ ಕುರಿತು ಮಿತ್ರ ಪಕ್ಷದ ಸದಸ್ಯರೊಂದಿಗೆ ನಡೆದ ಒಪ್ಪಂದದಂತೆ ಅಧಿಕಾರ ತ್ಯಜಿಸುತ್ತಿದ್ದು ಸಕಲೇಶಪುರ ಉಪ ವಿಭಾಗಾಧಿಕಾರಿಗಳಿಗೆ ರಾಜೀನಾಮೆ ಪತ್ರವನ್ನು ಇಂದೇ ಸಲ್ಲಿಸುತ್ತಿರುವುದಾಗಿ ಹೇಳಿದರು. ಪಟ್ಟಣದ ಅಭಿವೃದ್ಧಿ ಕುರಿತು ಹಲವು ಕಾಮಗಾರಿಗಳನ್ನು ಕೈಗೊಂಡಿದ್ದು ಅಧಿಕಾರಿಗಳು ಇದನ್ನು ಗುಣಮಟ್ಟದಿಂದ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಅಧಿಕಾರದ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ’ ಹೇಳಿದರು.

ಇದಕ್ಕೂ ಮುನ್ನ ಸಭೆಯಲ್ಲಿ 15ನೇ ಹಣಕಾಸು ಯೋಜನೆಯ ₹ 77 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಲ್ಲಿಕೆಯಾಗಿದ್ದ ಕಡಿಮೆ ಮೊತ್ತದ ಟೆಂಡರ್‌ಗಳಿಗೆ ಅನುಮೋದನೆ ನೀಡಲಾಯಿತು. ಕಡಿಮೆ ಮೊತ್ತಕ್ಕೆ ಟೆಂಡರ್ ಪಡೆದು ಕಳಪೆ ಕಾಮಗಾರಿ ನಡೆಸಲು ಅವಕಾಶ ನೀಡಬಾರದು, ಗುಣಮಟ್ಟದ ಕುರಿತು ಎಚ್ಚರ ವಹಿಸದಿದ್ದರೆ ಎಂಜಿನಿಯರ್ ಅವರನ್ನು ಹೊಣೆಗಾರರನ್ನಾಗಿಸುವುದಾಗಿ ಅಧ್ಯಕ್ಷ ಹೂವಣ್ಣ ಎಚ್ಚರಿಸಿದರು.

ADVERTISEMENT

‘ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿಲ್ಲ ಎಂದು ಸದಸ್ಯೆ ಎಚ್.ಎಸ್. ರಶ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷರ ಆಯ್ಕೆಯನ್ನು ಸರ್ವಾನುಮತದಿಂದ ನಡೆಸಲಾಗಿತ್ತು. ಸದಸ್ಯರನ್ನು ಆಯ್ಕೆ ಮಾಡುವ ವೇಳೆ ಎಲ್ಲ ಸದಸ್ಯರ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಆರೋಪಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಉತ್ತರಿಸಿ ಪಕ್ಷಾತೀತವಾಗಿ ಸದಸ್ಯರ ಆಯ್ಕೆ ನಡೆಸಲಾಗಿದೆ. ಈ ಕುರಿತು ಅನುಮಾನ ಬೇಡ ಸದಸ್ಯರು ಸಮಿತಿ ರಚನೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು. ಸಭೆ ಒಪ್ಪಿಗೆ ಸೂಚಿಸಿತು.

ಮುಖ್ಯಾಧಿಕಾರಿ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.