ADVERTISEMENT

ಸೋಲು– ಗೆಲುವು ಎದುರಿಸಿಕೊಂಡು ಬಂದಿದ್ದೇನೆ, ಜನರ ಋಣ ತೀರಿಸುವೆ: ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 12:40 IST
Last Updated 13 ಜನವರಿ 2025, 12:40 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಹಾಸನ: ‘1962ರಿಂದ ದೇವೇಗೌಡರಿಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ಹಾಸನ. ಎರಡನೇಯದ್ದು ಬೆಂಗಳೂರು ಗ್ರಾಮಾಂತರ ಕನಕಪುರ ಕ್ಷೇತ್ರ. ದೇವೇಗೌಡರು ಪ್ರಧಾನಿ, ಮುಖ್ಯಮಂತ್ರಿ, ಸಚಿವರಾಗಲು ಜನರು ಸಹಕಾರ ಮಾಡಿದ್ದಾರೆ. ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ಏಳಕ್ಕೆ ಏಳು ಕ್ಷೇತ್ರಗಳನ್ನು ಗೆಲ್ಲಿಸಿದ್ದು, ನಾನು ಬದುಕಿರುವವರೆಗೆ ಜಿಲ್ಲೆಯ ಜನರನ್ನು ಮರೆಯುವುದಿಲ್ಲ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಸರ್ಕಾರವಿರಲಿ, ಜಿಲ್ಲೆಗೆ ಉಳಿದಿರುವ ಕೆಲಸವನ್ನು ಮಾಡುತ್ತೇನೆ. ಏನೇ ಅಡೆತಡೆ ಬಂದರೂ ಕೆಲಸ ಮಾಡುತ್ತೇನೆ. ಅದೇ ನನ್ನ ಗುರಿ. ನಮ್ಮ ಕುಟುಂಬಕ್ಕೆ ಜಿಲ್ಲೆಯ ಜನ ಬೆಂಬಲ ನೀಡಿದ್ದಾರೆ. ಸೋಲು ಗೆಲುವು ಇದ್ದೇ ಇರುತ್ತದೆ. ಇವೆಲ್ಲವನ್ನೂ ಎದುರಿಸಿಕೊಂಡು ಬಂದಿದ್ದೇನೆ. ಜಿಲ್ಲೆಯ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಹಣ ಕೇಳುತ್ತಿದ್ದೇನೆ. ಕೊಟ್ಟರೆ ಸಂತೋಷ. ಕೊಡದೇ ಹೋದರೆ ಕಾಲ ಬಂದಾಗ ಮಾಡುತ್ತೇವೆ. 94ನೇ ವಯಸ್ಸಿನಲ್ಲಿಯೂ ರಾಜ್ಯಸಭೆ ಅಧಿವೇಶನದಲ್ಲಿ ಪಾಲ್ಗೊಂಡು ದೇವೇಗೌಡರು ರಾಜ್ಯದ ಪರ ಧ್ವನಿ ಎತ್ತುತ್ತಿದ್ದಾರೆ ಎಂದರು.

ADVERTISEMENT

ಜಾಗ ಕಬಳಿಕೆ: ಐಐಟಿ, ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಲವರು ಕಬಳಿಸುತ್ತಿದ್ದಾರೆ. ಅದನ್ನು ತಡೆಯಲು ಏನೇನು ಮಾಡಬೇಕು ಮಾಡುತ್ತೇನೆ ಎಂದು ಹೇಳಿದರು.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಸನ ಜಿಲ್ಲೆಯ ಲೂಟಿ ಹೊಡೆಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ಐಐಟಿ ಬೇರೆ ಜಿಲ್ಲೆಗೆ ಹೋಯಿತು. ದೇವೇಗೌಡರು ಬದುಕಿರುವುದರೊಳಗೆ ಐಐಟಿ ತರಲು ಪ್ರಯತ್ನ ಮಾಡುತ್ತೇನೆ ಎಂದರು.

ಐಐಟಿ ತರಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಎಲ್ಲೆಲ್ಲಿ ಯಾವ್ಯಾವ ಮ್ಯಾಜಿಕ್ ಮಾಡಬೇಕೋ ಮಾಡುತ್ತೇನೆ. ಮ್ಯಾಜಿಕ್ ಹೇಗೆ, ಎಲ್ಲಿ ಮಾಡಬೇಕು ಎಂದು ನನಗೆ ಗೊತ್ತಿದೆ. ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನ ಮಾಡುವುದಾಗಿ ರೇವಣ್ಣ ಹೇಳಿದರು.

ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ತಡೆಯಾಗಲು ಬಿಡುವುದಿಲ್ಲ. ಕೊನೆಯವರೆಗೂ ಹೋರಾಟ ಮಾಡುತ್ತೇನೆ. ದೇವೇಗೌಡರನ್ನು ಇಟ್ಟುಕೊಂಡು ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ತಿಳಿಸಿದರು.

ಕೆ.ಎಂಶಿ ಮೇವಿಗೆ ಹೋಗಿದ್ದಾರೆ: ‘15 ವರ್ಷ ಕೆಲವರಿಗೆ ಮೇವು ಹಾಕಿ ಸಾಕಿದೆ. ಎಲ್ಲ ಮಾಡಿದೆ. ಆದರೆ, ಬೇರೆ ಕಡೆ ಒಳ್ಳೆಯ ಮೇವು ಸಿಗುತ್ತದೆ ಎಂದು ಹೋಗಿದ್ದಾರೆ. ಕುಮಾರಸ್ವಾಮಿ ಅವರನ್ನು ಕಳುಹಿಸಿ ಎಂದಿದ್ದರು. ಅದಕ್ಕೆ ಕಳುಹಿಸಿದ್ದೇನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು ಡಿ.ಕೆ. ಶಿವಕುಮಾರ್‌ ಸಹೋದರರು ಹಾಗೂ ಶಾಸಕ ಶಿವಲಿಂಗೇಗೌಡ ವಿರುದ್ಧ ಪರೋಕ್ಷವಾಗಿ ರೇವಣ್ಣ ಕಿಡಿ ಕಾರಿದರು.

ನನ್ನ ಕೈಗೆ ಸಿಗದೆ ಎಲ್ಲಿ ಹೋಗುತ್ತಾರೆ?

‘ಜಿಲ್ಲಾಧಿಕಾರಿ ಎಸ್ಪಿ ಜಿಲ್ಲಾ ಪಂಚಾಯತಿ ಸಿಇಒ ಉಪ ವಿಭಾಗಾಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿ ಎಸ್ಪಿಗೆ ಬಡ್ತಿ ನೀಡಿದ್ದಾರೆ. ಇವರೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತದೆ ಅಂದುಕೊಂಡಿದ್ದಾರೆ. ನನ್ನ ಕೈಗೆ ಸಿಗದೇ ಎಲ್ಲಿ ಹೋಗುತ್ತಾರೆ’ ಎಂದು ಕಿಡಿ ಕಾರಿದರು.

‘ಸಮಯ ಬರುತ್ತದೆ. ಇವರಿಗೆ ನಾನು ಹೆದರಿ ಓಡಿ ಹೋಗುತ್ತೇನೆ ಎಂದು ತಿಳಿದುಕೊಂಡಿದ್ದಾರೆ. ದೇವೇಗೌಡರ ಕುಟುಂಬದ್ದು ಮುಗಿದ ಹೋಯಿತು ಅಂದುಕೊಂಡಿದ್ದಾರೆ. 2025 ರಿಂದ ಪ್ರಾರಂಭ. ಈ ದೇಶದ ರಾಜಕೀಯ ನೋಡಿದ್ದೇನೆ‌. ಕೇಸ್ ಹಾಕಿದರೆ ಹೆದರುತ್ತೇನೆ ಅಂದುಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮನ್ನು ಏನೂ ಮಾಡಲು ಆಗಲ್ಲ ಅಂದುಕೊಂಡಿದ್ದಾರೆ. ಇಂತಹ ಬಹಳ ಜನ ನೋಡಿದ್ದೇನೆ. ಇವರು ಮಾಡಿರುವ ಅಕ್ರಮದ ದಾರಾವಾಹಿಯನ್ನು ನಾನಾ ಭಾಗಗಳಲ್ಲಿ ಬಿಡುಗಡೆ ಮಾಡುತ್ತೇನೆ. ಇಂಥದೆನ್ನೆಲ್ಲಾ ನಾನು ಬಹಳ ನೋಡಿದ್ದೇನೆ’ ಎಂದು ಲೇವಡಿ ಮಾಡಿದರು.

ಪೊಲೀಸ್ ಠಾಣೆಯಲ್ಲ ದಂಧೆ ಕೇಂದ್ರ

‘ಜಿಲ್ಲಾಧಿಕಾರಿ ಕಚೇರಿ ಕಂದಾಯ ಪೊಲೀಸ್ ಇಲಾಖೆ ಒಂದು ಪಕ್ಷದ ಕಚೇರಿ ಆಗಬಾರದು‌. ಪೊಲೀಸ್ ಇಲಾಖೆಯಲ್ಲಿ ಹಿಂದೆಂದೂ ಕಾಣದ ದಂಧೆ ನಡೆಯುತ್ತಿದೆ. ಈ ರೀತಿ ದಂಧೆ ನಾನು ನೋಡಿಯೇ ಇಲ್ಲ. ಮದ್ಯದ ಅಂಗಡಿಗಳು ಹೆಚ್ಚಾಗುತ್ತಿದ್ದು ಮಟ್ಕಾ ಜೂಜಾಟ ಕೊಲೆಗಳು ನಡೆಯುತ್ತಿದೆ’ ಎಂದು ರೇವಣ್ಣ ಆರೋಪಿಸಿದರು.

‘2019-20 ರಿಂದ ಎರಡೂ ಪಕ್ಷಗಳ ಕೆಲ ಮುಖಂಡರು ಜೆಡಿಎಸ್ ಮುಗಿಸಲು ಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೆಲವರು ಠಿಕಾಣಿ ಹೊಡಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಹೊಡೆತದಲ್ಲಿ ನಾಲ್ಕು ಮಂದಿ ಶಾಸಕರನ್ನು ಜನ ಗೆಲ್ಲಿಸಿದ್ದಾರೆ. ಬೇಕಾದಾಗ ಕಾಲು ಕಟ್ಟುತ್ತಾರೆ. ಬೇಡವಾದಾಗ ಒದೆಯುತ್ತಾರೆ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.